ದಕ್ಷಿಣ ಕನ್ನಡ: ದ್ವಿಚಕ್ರ ವಾಹನಗಳ ನಡುವಿನ ಅಪಘಾತದ ವಿಚಾರವಾಗಿ ಶುರುವಾದ ಗಲಾಟೆಯೂ ಪ್ರಖ್ಯಾತ ಹುಲಿವೇಷ ಕಲಾವಿದನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಪ್ರಸಿದ್ಧ ನವರಾತ್ರಿ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ (24) ಎಂಬ ಯುವಕನನ್ನು ಸೋಮವಾರ ಮಧ್ಯರಾತ್ರಿ ಮಾಣಿ-ಮೈಸೂರು ಹೆದ್ದಾರಿಯ ನೆಹರೂ ನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ. ಬಂಧಿತರನ್ನು ಬನ್ನೂರು ನಿವಾಸಿ ಮನೀಷ್ ಹಾಗೂ ಚೇತು ಎಂದು ತಿಳಿದು ಬಂದಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ: VIDEO| ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರಿಗೆ ಗುದ್ದಿದ ಬಸ್; ಮೂವರು ಸಾವು
ಹಣಕಾಸು ವಿಚಾರವಾಗಿ ಹತ್ಯೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಪಘಾತವೊಂದರ ವಿಚಾರದಲ್ಲಿ ಪರಸ್ಪರ ಚರ್ಚೆ ನಡೆದಿದ್ದು, ದುಡ್ಡಿನ ವಿಚಾರದಲ್ಲಿ ಪರಿಚಿತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಘಟನೆ ಸಂಬಂಧ ಇಬ್ಬರು ಆರೋಪಿಗಳು ಶರಣಾಗಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ. ಓರ್ವನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.