ಬೆಂಗಳೂರು: ಎರಡು ಬಾರಿ ಟ್ರೈಲರ್ ನೋಡಿದ ನಂತರ ಅಲ್ಲಿದ್ದವರಿಗೆಲ್ಲ, ಚಿತ್ರದಲ್ಲಿ ಹಿಂಸೆ, ರಕ್ತಪಾಸ ಜಾಸ್ತಿ ಆಯ್ತು ಎಂದು ಮಾತಾಡಿಕೊಳ್ಳುತ್ತಿರುವಾಗಲೇ ನಿರ್ದೇಶಕರು ಕೈಗೆ ಮೈಕ್ ಎತ್ತಿಕೊಂಡರು. ‘ಟ್ರೈಲರ್ ನೋಡಿ ಯಾಕಿಷ್ಟು ಹಿಂಸೆ ಅನ್ನೋರಿಗೆ ಸಿನಿಮಾ ನೋಡಿದ ಮೇಲೆ, ವಯಲೆನ್ಸ್ ಯಾಕೆ ಎಂಬುದು ಅರ್ಥವಾಗುತ್ತದೆ’ ಎಂದರು. ಆದರೆ, ಪ್ರಶ್ನೆಗೆ ಉತ್ತರ ಮಾತ್ರ ಸಿಗಲಿಲ್ಲ.
ಇದನ್ನೂ ಓದಿ: ಹಿಟ್ ಸೀರಿಯಲ್ಗಳ ನಿರ್ದೇಶಕ ಚಿತ್ರರಂಗಕ್ಕೆ; ‘ಕಂಬ್ಳಿಹುಳ’ ನಟನ ಜತೆಗೆ ಸಿನಿಮಾ
ಇದಾಗಿದ್ದು ‘ಥಗ್ಸ್ ಆಫ್ ರಾಮಘಡ’ ಎಂಬ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ. ಟ್ರೈಲರ್ ರಿಲೀಸ್ ಮಾಡೋದಕ್ಕೆ ‘ಡಾಲಿ’ ಧನಂಜಯ್ ಬಂದಿದ್ದರು. ಟ್ರೈಲರ್ ತೋರಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಈ ತಂಡ ನೋಡಿ ಖುಷಿಯಾಯಿತು. ನಿರ್ದೇಶಕ ಕಾರ್ತಿಕ್ ಒಳ್ಳೆಯ ತಂಡ ಕಟ್ಟಿಕೊಂಡು, ನೈಜ ಘಟನೆ ಆಧರಿಸಿದ ಸಿನಿಮಾ ಮಾಡಿದ್ದಾರೆ. ಮುಂದಿನ ವರ್ಷದ ಮೊದಲ ಹಿಟ್ ಸಿನಿಮಾ ಇದಾಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬರಲಿ. ಆ ಭಾಗದ ಕಥೆಗಳನ್ನು ಹೇಳಲಿ’ ಎಂದು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಕಾರ್ತಿಕ್ ಮಾರಲಭಾವಿ ಮಾತನಾಡಿ, ‘ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುತ್ತಿದೆ. ನಾನು ಯಾದಗಿರಿಯ ಪುಟ್ಟ ಹಳ್ಳಿಯಿಂದ ಬಂದವನು. ಧನಂಜಯ್ ಅವರ ‘ಜಯನಗರ 4th ಬ್ಲಾಕ್’ ಕಿರುಚಿತ್ರ ನೋಡಿ ಸ್ಪೂರ್ತಿ ಪಡೆದು ಚಿತ್ರರಂಗಕ್ಕೆ ಬಂದೆ. ನಾನು ಕಿರುಚಿತ್ರ ನಿರ್ದೇಶನ ಮಾಡೋಕೆ ಆರಂಭಿಸಿದೆ. ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಊರಿನಲ್ಲಿ ನಮ್ಮ ಹಿರಿಯರು ಹಿಂದೆ ನಡೆದ ಘಟನೆ ಬಗ್ಗೆ ಕಥೆ ಹೇಳುತ್ತಿದ್ದರು. ಆ ಘಟನೆ ಆಧಾರವಾಗಿಟ್ಟುಕೊಂಡು ಕಥೆ ಹೆಣೆದು ಅದಕ್ಕೊಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದೇನೆ’ ಎಂದರು.
ಇದನ್ನೂ ಓದಿ: ‘ಬಂಗಾರದ ಮನುಷ್ಯ’ನಿಗೆ 50; 22ಕ್ಕೆ ಐವರು ರೈತರಿಗೆ ಸನ್ಮಾನ
ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವನ್ನು ಭಾರತ್ ಟಾಕೀಸ್ನಡಿ ಜೈ ಕುಮಾರ್, ಕೀರ್ತಿರಾಜ್ ನಿರ್ಮಾಣ ಮಾಡಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಮನು ದಾಸಪ್ಪ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
‘ಜೈ ಎಲೆಕ್ಷನ್ ಧನ್ ಧನಾ ಧನ್ …’; ‘ಪ್ರಜಾರಾಜ್ಯ’ಕ್ಕೆ ಭಟ್ಟರ ಸಾಹಿತ್ಯ, ಉಪ್ಪಿ ಹಾಡು …