ವಿಲ್ಲುಪುರಂ : ಕರೊನಾ ಸಮಯದಲ್ಲಿ ಅನುಮತಿ ಇಲ್ಲದೆ ಸಂಗೀತ ಕಾರ್ಯಕ್ರಮ ಆಯೋಜಿಸಿದ ದಲಿತ ಸಮುದಾಯದ ಮೂವರು ಹಿರಿಯರು ಪಂಚಾಯಿತಿ ಕಟ್ಟೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕಾಗಿಬಂದ ಪ್ರಸಂಗ ತಮಿಳುನಾಡಿನಿಂದ ವರದಿಯಾಗಿದೆ. ಈ ಬಗೆಗಿನ ಫೋಟೋ ವೈರಲ್ ಆಗಿದ್ದು, ಹಳ್ಳಿಗಳಲ್ಲಿ ಜಾತಿಯ ಹೆಸರಲ್ಲಿ ಶೋಷಣೆ ಇನ್ನೂ ಮುಂದುವರಿದಿದೆಯೇ ಎಂಬ ಪ್ರಶ್ನೆ ಎದ್ದಿದೆ.
ರಾಜ್ಯದ ವಿಲ್ಲುಪುರಂನ ಒಟ್ಟನಂದಲ್ ಪಂಚಾಯಿತಿಯ ವ್ಯಾಪ್ತಿಗೆ ಬರುವ ಗ್ರಾಮದಲ್ಲಿ ಕೆಲವು ದಲಿತ ಕುಟುಂಬಗಳು ಮೇ 12 ರಂದು ಗ್ರಾಮದೇವತೆಗೆ ಚಿಕ್ಕ ಪೂಜೆಯನ್ನು ಆಯೋಜಿಸಿದ್ದವು. ಆದರೆ ತತ್ಸಂಬಂಧ ನಡೆಸಿದ ಸಂಗೀತ ಕಾರ್ಯಕ್ರಮಕ್ಕೆ ಕರೊನಾ ಪ್ರೊಟೊಕಾಲ್ ವಿರುದ್ಧವಾಗಿ ಭಾರೀ ಜನಜಂಗುಳಿ ಸೇರಿತು. ಮಾಹಿತಿ ಸಿಕ್ಕ ಪೊಲೀಸರು ಹಳ್ಳಿಗೆ ಹೋಗಿ ಸೇರಿದ್ದ ನೂರಾರು ಜನರನ್ನು ಚದುರಿಸಿ ಕಾರ್ಯಕ್ರಮ ನಿಲ್ಲಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು
ಪೊಲೀಸರು ಆಯೋಜಕರನ್ನು ತಿರುವೆಣ್ಣೈನಲ್ಲೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ, ಲಿಖಿತ ಕ್ಷಮಾ ಪತ್ರ ಕೊಟ್ಟು ಮತ್ತೆ ಈ ರೀತಿಯ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅವರನ್ನು ಮನೆಗೆ ಕಳುಹಿಸಲಾಯಿತು. ಆದರೆ ಈ ಗುಂಪಿನ ಜನರು ಗ್ರಾಮಕ್ಕೆ ಹಿಂತಿರುಗಿದಂತೆ ಹಳ್ಳಿಯ ಪಂಚಾಯಿತಿಯು ಅವರಿಗೆ ಪಂಚಾಯಿತಿ ಕಟ್ಟೆಯಲ್ಲಿ ಮೇ 14 ರಂದು ಹಾಜರಾಗಲು ನೋಟಿಸ್ ನೀಡಿದರು ಎನ್ನಲಾಗಿದೆ.
ಪಂಚಾಯಿತಿ ಕಟ್ಟೆಗೆ ಹೋದ ತಿರುಮಲ್, ಸಂತಾನಂ ಮತ್ತು ಅರುಮುಗಂ ಎಂಬುವರನ್ನು, ಪಂಚಾಯಿತಿಯ ಅನುಮತಿ ಪಡೆಯದೆ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಗ್ರಾಮದ ಹಿರಿಯರು ತರಾಟೆಗೆ ತೆಗೆದುಕೊಂಡರು. ನಂತರ ಪಂಚಾಯಿತಿ ಸದಸ್ಯರ ಕಾಲಿಗೆ ಬಿದ್ದು ಕ್ಷಮೆ ಕೋರಲು ಹೇಳಲಾಯಿತು. ಮೂವರೂ ಪಂಚಾಯಿತಿಯ ಕೆಲವು ಸದಸ್ಯರ ಮುಂದೆ ಉದ್ದಂಡ ಮಲಗಿ ಕ್ಷಮೆ ಕೋರಿದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ 8 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಲಭ್ಯವಾಗಲಿದೆ ಲಸಿಕೆ : 3 ದಿನಗಳಲ್ಲಿ ರಾಜ್ಯಗಳಿಗೆ 51 ಲಕ್ಷ ಡೋಸ್
“ಬ್ಲಾಕ್ ಫಂಗಸ್ ಸೋಂಕು ತಡೆಯಬೇಕೆಂದರೆ ಸ್ಟೆರಾಯ್ಡ್ಗಳ ದುರ್ಬಳಕೆ ನಿಲ್ಲಿಸಿ”