ಯಶವಂತಪುರ: ಕೊಮ್ಮಘಟ್ಟ ಗ್ರಾಮದ ಸುತ್ತಮುತ್ತ ಇರುವ ಗುಡಿ ಕೈಗಾರಿಕೆ ಹಾಗೂ ಬಡಾವಣೆಗಳ ಒಳಚರಂಡಿ ನೀರು ಕೊಮ್ಮಘಟ್ಟ ಕೆರೆಗೆ ಹರಿದುಬರುತ್ತಿದ್ದು, ಸಾಕಿದ ಸಾವಿರಾರು ಮೀನುಗಳು ಸಾವಿಗೀಡಾಗಿವೆ. ಈ ಕಲುಷಿತ ನೀರಿನ ಸಮಸ್ಯೆ ಬಗೆಹರಿಸುವತ್ತ ಗಮನ ಕೊಡಬೇಕಾಗಿದ್ದ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಬಿಬಿಎಂಪಿ ಸುಪರ್ದಿಯಲ್ಲಿರುವ ದೊಡ್ಡಬಸ್ತಿ (ರಾಮಸಂದ್ರ) ಕೆರೆಯನ್ನು ಅಭಿವೃದ್ಧಿಪಡಿಸಲು ಅಲ್ಲಿನ ಕಲುಷಿತ ನೀರನ್ನು ಕೊಮ್ಮಘಟ್ಟ ಕೆರೆಗೆ ಹರಿಸಿದ್ದರಿಂದ ಇಷ್ಟೆಲ್ಲ ಅವಾಂತರವಾಗಿದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ. ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದೇ ಕಾಮಗಾರಿ ನಿರ್ವಹಿಸಿದ್ದೇವೆ. ಕೊಮ್ಮಘಟ್ಟ ಕೆರೆ ಮೊದಲೇ ಕಲುಷಿತಗೊಂಡಿತ್ತು. ದೊಡ್ಡಬಸ್ತಿಯಿಂದ ಬಿಟ್ಟಿರುವ ವಿಷಯುಕ್ತ ನೀರಿನಿಂದ ಮೀನುಗಳ ಸಾವು ಸಂಭವಿಸಿರುವುದು ಸುಳ್ಳು. ವಿನಾಕಾರಣ ಪಾಲಿಕೆ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ ನಿವೇಶನ ರಹಿತರ ಮನವೊಲಿಸುವಲ್ಲಿ ಶಾಸಕ, ಅಧಿಕಾರಿಗಳು ಯಶಸ್ವಿ
ಕಲುಷಿತಗೊಂಡಿರುವ ಕೊಮ್ಮಘಟ್ಟ ಕೆರೆ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುವಂತೆ ಬಗ್ಗೆ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ನೋಟಿಸ್ ನೀಡಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಆ ನೆಲೆಯಲ್ಲಿ ಕಾರ್ಯಪ್ರವೃತ್ತವಾಗದ ಕಾರಣ ಈಗ ಸಾವಿರಾರು ಮೀನುಗಳ ಸಾಯುವಂತಾಗಿದೆ. ಕೆರೆ ಸುತ್ತಮುತ್ತ ಕೆಟ್ಟವಾಸನೆ ಹಬ್ಬಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
‘ಕಲುಷಿತಗೊಂಡ ಕೊಮ್ಮಘಟ್ಟ ಕೆರೆ’ ಶೀರ್ಷಿಕೆಯಡಿ ‘ವಿಜಯವಾಣಿ’ ಕಳೆದ ವರ್ಷ ಡಿ.16ರಂದು ವರದಿ ಪ್ರಕಟಿಸಿತ್ತು. ಆಗ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಧಿಕಾರಿಗಳು ಗಮನಾರ್ಹ ಕೆಲಸ ಮಾಡಿದ್ದರು. ಬಳಿಕ, ಮತ್ತೆ ಕೆರೆಯನ್ನು ನಿರ್ಲಕ್ಷಿಸಿದ್ದರು.