ರಾಮನಗರ: ಅಪ್ಪ-ಅಮ್ಮ ಓದು ಅಂತ ಒತ್ತಾಯ ಮಾಡಿದರೆ ಮಕ್ಕಳು ಅಮ್ಮಮ್ಮ ಎಂದರೆ ಓದದೇ ರಚ್ಚೆ ಹಿಡಿಯಬಹುದು, ಊಟ-ತಿಂಡಿ ತಿನ್ನದೆ ಸತಾಯಿಸಬಹುದು. ಆದರೆ ತಂದೆ-ತಾಯಿ ಓದು ಎಂದು ಒತ್ತಾಯಿಸಿದ್ದಕ್ಕೆ ಇಲ್ಲೊಬ್ಬ ಹದಿನಾರರ ಪೋರ ಎಂಥವರೂ ಒಮ್ಮೆ ಹುಬ್ಬೇರಿಸುವಂಥ ಖತರ್ನಾಕ್ ಕೆಲಸ ಮಾಡಿದ್ದಾನೆ.
ಕಳೆದ ಶುಕ್ರವಾರ ಸೈಬರ್ ಸೆಂಟರ್ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಈತ, ಮನೆಗೆ ಮರಳಲಿಲ್ಲ. ಬಳಿಕ ತನ್ನನ್ನು ಕಟ್ಟಿ ಹಾಕಿ ಕೂಡಿ ಹಾಕಿರುವ ಫೋಟೋವೊಂದನ್ನು ಪಕ್ಕದ ಮನೆಯವರ ಮೊಬೈಲ್ಫೋನ್ಗೆ ಕಳುಹಿಸಿದ್ದಾನೆ. ಮಾತ್ರವಲ್ಲ, ತನ್ನ ಅಪಹರಣವಾಗಿದೆ ಎಂದು ಹೇಳಿ ತಂದೆ-ತಾಯಿಯರಿಂದ 5 ಲಕ್ಷ ರೂ. ಬೇಡಿಕೆ ಇರಿಸಿದ್ದಾನೆ.
ರಾಮನಗರ ಜಿಲ್ಲೆ ಕನಕಪುರದಲ್ಲಿ ನೆಲೆಸಿರುವ, ತಮಿಳುನಾಡು ಮೂಲದ ಬಟ್ಟೆ ಅಂಗಡಿ ಮಾಲೀಕ ಮನೋಹರ್ ಎಂಬವರ ಮಗ ಸರ್ವೇಶ್ (16) ಇಂಥದ್ದೊಂದು ಕೆಲಸ ಮಾಡಿದ್ದಾನೆ. ಸರ್ವೇಶ್ನನ್ನು ಕಟ್ಟಿ ಹಾಕಿದ್ದ ಫೋಟೋ ಪಕ್ಕದ ಮನೆಯವರ ಫೋನ್ಗೆ ಬಂದ ಬಳಿಕ ಅದು ವೈರಲ್ ಆಗಿದ್ದಲ್ಲದೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿತ್ತು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಕನಕಪುರ ಠಾಣೆ ಪೊಲೀಸರು, ಬಾಲಕ ತಿರುಪತಿಯ ಲಾಡ್ಜ್ವೊಂದರಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಬಾಲಕನನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಓದು ಎಂದು ಒತ್ತಾಯಿಸುವ ಪಾಲಕರಿಂದ ತಪ್ಪಿಸಿಕೊಳ್ಳಲು ಹಾಗೂ ಅವರಿಂದ ಹಣ ಕೀಳಲು ಈ ರೀತಿಯ ನಾಟಕವಾಡಿರುವುದನ್ನು ಬಾಯಿಬಿಟ್ಟಿದ್ದಾನೆ. ಇದು ಪಾಲಕರನ್ನು ಬೆದರಿಸಲು ಬಾಲಕ ಆಡಿದ ನಾಟಕ, ಆತನ ಅಪಹರಣವಾಗಿಲ್ಲ ಎಂದು ಎಸ್ಪಿ ಗಿರೀಶ್ ಸ್ಪಷ್ಟಪಡಿಸಿದ್ದಾರೆ.