ಅಹಮದಾಬಾದ್: ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳು ಸೇರಿದಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹೆಚ್ಚಳವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೈತರೊಬ್ಬರು ನಾಲ್ಕು ಲೀಟರ್ ಪೆಟ್ರೋಲ್ಗೆ 16 ಸಾವಿರ ರೂಪಾಯಿ ಕಟ್ಟಿರುವ ಘಟನೆ ದೇವಭೂಮಿ ಎಂದೇ ಖ್ಯಾತಿ ಪಡೆದಿರುವ ದ್ವಾರಕಾದಲ್ಲಿ ನಡೆದಿದೆ.
ಹೌದು ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಪ್ರಕರಣ ಒಂದರಲ್ಲಿ ರೈತ ವಿಶಾಲ್ ಹಿರ್ಪಾರಾ (34) ಎಂಬುವವರು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ಖದೀಮರು ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು ಕ್ಲೋನ್ ಮಾಡಿ ಅದಕ್ಕೆ ಸ್ಕಿಮ್ಮರ್ ಎಂಬ ಸಾಧನವನ್ನು ಅಳವಡಿಸಿ ಅವರ ಖಅತೆಯಿಂದ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರೈತ ವಿಶಾಲ್ ತಮ್ಮ ಗಾಡಿಗೆ ನಾಲ್ಕು ಲೀಟರ್ ಪೆಟ್ರೋಲ್ ಹಾಕಿಸಿದ ನಂತರ ಅದಕ್ಕೆ 400 ರೂಪಾಯಿ ಪಾವತಿ ಮಾಡಬೇಕಿತ್ತು. ಅದರಂತೆ ಅವರು ತಮ್ಮ ಬಳಿ ಇದ್ದ ಕಾರ್ಡ್ನಿಂದ ಮೆಷಿನ್ನಲ್ಲಿ ಸ್ವೈಪ್ ಮಾಡಿದ್ದಾರೆ. ಆದರೆ, ಇದಾದ ಕೆಲ ಕ್ಷಣದ ಬಳಿಕ ಅವರ ಉಳಿತಾಯ ಖಾತೆಯಲ್ಲಿದ್ದ 16 ಸಾವಿರ ರೂಪಾಯಿ ಹಣ ಕಟ್ ಆಗಿರುವುದಾಗಿ ಅವರಿಗೆ ಮೆಸ್ಸೇಜ್ ಬಂದಿದೆ.
ಇದನ್ನೂ ಓದಿ: ನೂತನ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ ನಟಿ ಸಮಂತಾ; ಶುಭಕೋರಿದ ಸೆಲೆಬ್ರಿಟಿಗಳು
ತಕ್ಷಣವೇ ಎಚ್ಚೆತ್ತ ರೈತ ವಿಶಾಳ್ ಕೂಡಲೇ ಕಂಟ್ರೋಲ್ ರೂಮಿಗೆ ಕರೆ ಮಾಡಿ ದೂರು ದಾಖಲಿಸಿದ್ದು, ಅವರು ತಮ್ಮ ಕಾರ್ಡ್ ಮಾಹಿತಿಯನ್ನು ಯಾರ ಬಳಿಯೂ ಹಂಚಿಕೊಂಡಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಇದೊಂದು ಹೊಸ ವಿಧಾನವಾಗಿದ್ದು ಖದೀಮರು ಪಾಯಿಂಟ್ ಆಫ್ ಸೇಲ್ (POS) ಯಂತ್ರವನ್ನು ಕ್ಲೋನ್ ಮಾಡಿ ಅದಕ್ಕೆ ಸ್ಕಿಮ್ಮರ್ ಎಂಬ ಸಾಧನವನ್ನು ಅಳವಡಿಸಿ ಕಾರ್ಡ್ ಸ್ವೈಪ್ ಮಾಡುವ ಪ್ರತಿಯೊಬ್ಬರ ಖಾತೆಯಿಂದ ಹಣವನ್ನು ಲಪಟಾಯಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಕ್ರಮ ಜರುಗಿಸಲಾಗುವುದು ಮತ್ತು ಜನರು ಎಚ್ಚರವಾಗಿರುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.