ರಾಯಚೂರು: ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಿ.ಕೆ.ಹರಿಪ್ರಸಾದ ಮತ್ತು ಸಿಎಂ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಬಿಂಬಿಸಲಾಗುತ್ತಿದೆ. ಹರಿಪ್ರಸಾದ್ ತಮ್ಮ ಸಮಾಜಕ್ಕೆ ಸಂಬಂಸಿದಂತೆ ಹೇಳಿಕೆ ನೀಡಿದ್ದಾರೆ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಸಮಾಜದ ಕಾರ್ಯಕ್ರಮಕ್ಕೆ ಸಿಎಂ ಆದಿಯಾಗಿ ಎಲ್ಲ ಸಚಿವರನ್ನು ಕರೆದಿದ್ದಾರೆ. ಹರಿಪ್ರಸಾದ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿರುವುದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಪಕ್ಷಕ್ಕೂ ತಳುಕು ಹಾಕುವುದು ಸರಿಯಲ್ಲ ಎಂದರು.
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾವು ಬೆಂಬಲ ನೀಡಿದಾಗ ಅವರಿಗೆ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದೆ ಅಮೇರಿಕಾಗೆ ಹೋಗಿ ಕುಳಿತುಕೊಂಡಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನ ಗೆಲ್ಲದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಹೇಳಿದ್ದರು. ಅವರು ತಮ್ಮ ಮಾತು ಉಳಿಸಿಕೊಂಡಿದ್ದಾರಾ? ಮಾಜಿ ಪ್ರಧಾನಿ ದೇವೇಗೌಡರು ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜತೆ ಕೈಜೋಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಜನರು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ.
ಪ್ರಜಾತಂತ್ರ ವ್ಯವಸ್ಥೆಯನ್ನು ಹದಗೆಡಿಸಿದ್ದು, ಸಾವಿರಾರು ಕೋಟಿ ಖರ್ಚು ಮಾಡಿ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಶಾಸಕರನ್ನು ಖರೀದಿ ಮಾಡಿದ್ದರು. ಅದಕ್ಕೆ ಮೋದಿ, ಅಮೀತ್ ಷಾ ಮನೆಯಿಂದ ಹಣ ತಂದಿದ್ದರಾ. ಸಚಿವ ಪ್ರಹ್ಲಾದ್ ಜೋಷಿ ಅದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು.
ಬಿಜೆಪಿ ನಾಯಕರು ಇಡಿ, ಸಿಬಿಐ, ಐಟಿ ಇಲಾಖೆಯನ್ನು ಹಿಡಿತದಲ್ಲಿಟ್ಟುಕೊಂಡು ರಾಜಕೀಯ ಆಟವಾಡುತ್ತಿದ್ದಾರೆ. ವಿರೋಗಳನ್ನು, ವಿರೋಧ ಪಕ್ಷಗಳನ್ನು ಟಾರ್ಗೇಟ್ ಇಟ್ಟುಕೊಂಡು ತುಳಿಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಎನ್.ಎಸ್.ಬೋಸರಾಜು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಯಣ್ಣ, ಪಕ್ಷದ ಮುಖಂಡರಾದ ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಶ್ರೀಕಾಂತ, ಬಸವರಾಜ ಪಾಟೀಲ್ ಅತ್ತನೂರು ಉಪಸ್ಥಿತರಿದ್ದರು.