ನವದೆಹಲಿ: ಕಾರ್ಗಿಲ್ ರಣಂಗಾಣದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ ತುಂಬಿದ್ದು, ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಸೈನಿಕರ ಬಲಿದಾನವನ್ನು ಸ್ಮರಿಸಿದರು. ಇದರ ಜತೆಗೆ ಕರೊನಾ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸೋಣ ಎಂದು ಕರೆ ನೀಡಿದರು.
ಇಂದು ಕಾರ್ಗಿಲ್ ವಿಜಯ್ ದಿವಸ ಇದೆ. ಕಾರ್ಗಿಲ್ ಹುತಾತ್ಮ ಯೋಧರಿಗೆ ನನ್ನ ನಮನಗಳು. 21 ವರ್ಷಗಳ ಹಿಂದೆ ಇದೇ ದಿನ ನಾವು ಪಾಕ್ ವಿರುದ್ಧ ಜಯ ಸಾಧಿಸಿದ್ದೆವು. ದೇಶದೆಲ್ಲೆಡೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ. ಕಾರ್ಗಿಲ್ ಯುದ್ಧದಿಂದ ನಮ್ಮ ಯೋಧರ ಶಕ್ತಿ ಜಗತ್ತಿಗೆ ಪರಿಚಯವಾಗಿದೆ ಎಂದು ಸ್ಮರಿಸಿದರು.
ಯೋಧರಿಗಾಗಿ ವೆಬ್ಸೈಟ್ ಮೂಲಕ ಗೌರವ ಸಲ್ಲಿಸಿ. ಅಟಲ್ ಬಿಹಾರಿ ವಾಜಪೇಯಿ ಮಾತು ಇಂದಿಗೂ ಪ್ರಸ್ತುತವಾಗಿದೆ. ಕಾರ್ಗಿಲ್ ಯುದ್ಧ ಹೊಸ ಮಂತ್ರ ಶುರುಮಾಡಿದೆ ಎಂದಿದ್ದರು. ಯುದ್ಧದ ಪರಿಸ್ಥಿತಿ ನಮ್ಮ ಮನೋಬಲವನ್ನು ಬದಲಾಯಿಸಿತು. ನಮ್ಮ ಆಚಾರ, ವಿಚಾರ, ವ್ಯವಹಾರ, ಮರ್ಯಾದೆ ಎಲ್ಲವೂ ಬದಲಾಯಿತು. ಸಂಘ ಶಕ್ತಿ ಉಘೇ ಉಘೇ ಎಂಬುದನ್ನು ಎತ್ತಿ ತೋರಿಸಲಾಯಿತು ಎಂದರು.
ಕರೊನಾ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಬಿಟ್ಟಿದೆ. ಕರೊನಾ ಎದುರಿಸಲು ಮತ್ತಷ್ಟು ಶಕ್ತರಾಗಬೇಕು. ಮಾಸ್ಕ್ ಸದ್ಯ ನಮ್ಮ ಜೀವನದ ಅಂಗವಾಗಿದೆ. ಮಾತನಾಡುವಾಗ ಮಾಸ್ಕ್ ಇರಲೇಬೇಕು. ಆದರೆ ಮಾಸ್ಕ್ ತೆಗೆದು ಮಾತನಾಡುತ್ತೀರಾ, ಇದರಿಂದ ಸೋಂಕು ಹರಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ವೈದ್ಯರು ಸತತ ಎಂಟು ಗಂಟೆಗಳ ಕಾಲ ಮಾಸ್ಕ್ ಧರಿಸಿರುತ್ತಾರೆ ಎಂದು ಉದಾಹರಣೆ ನೀಡಿದರು.
ಹಲವು ಗ್ರಾಮಗಳಲ್ಲಿ ಕರೊನಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿ ಕ್ವಾರಂಟೈನ್ ಕೇಂದ್ರ ತೆರೆದಿದ್ದಾರೆ. ಸ್ವಂತ ಖರ್ಚಿನಲ್ಲಿ ಕರೊನಾ ರೋಗಿಗಳಿಗೆ ಬೆಡ್ಗಳನ್ನು ನಿರ್ಮಿಸಿದ್ದಾರೆ. ಬಲಬೀರ್ ಎನ್ನುವ ವ್ಯಕ್ತಿ ಸ್ವಂತ ಹಣದಲ್ಲಿ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಜಮ್ಮುವಿನ ಗ್ರಾಮ ಕರೊನಾ ಎದುರಿಸುವಲ್ಲಿ ಮಾದರಿ ಹಳ್ಳಿಯಾಗಿದೆ. ವಿಪತ್ತಿನ ಸಮಯದಲ್ಲೂ ನಾವು ವಿಕಾಸ ಹೊಂದಬೇಕು. ಕರೊನಾ ವಿರುದ್ಧ ನಾವು ಹೋರಾಟ ಮುಂದುವರಿಸೋಣ ಎಂದರು.
ಈಶಾನ್ಯ ರಾಜ್ಯಗಳಲ್ಲಿ ಬಿದುರಿನಿಂದ ಬಾಕ್ಸ್, ಬಾಟಲ್ಗಳನ್ನು ತಯಾರಿಸಲಾಗುತ್ತಿದೆ. ಖಚ್ ಲಡಾಖ್ ಪ್ರದೇಶಗಳಲ್ಲಿ ಕೃಷಿ ಕಾರ್ಯ ನಡೆಯುತ್ತಿವೆ. ಅಲ್ಲಿ ಬೆಳೆಯುತ್ತಿರುವ ಹಣ್ಣುಗಳು ಎಲ್ಲಾ ಕಡೆ ಮಾರಾಟವಾಗುತ್ತಿವೆ. ಕಚ್ ಪ್ರದೇಶದ ಡ್ರ್ಯಾಗನ್ ಫ್ರೂಟ್ ರೈತರ ಕೈಹಿಡಿದಿದೆ. ನಾವು ಈಗ ಡ್ರ್ಯಾಗನ್ ಫ್ರೂಟ್ ಆಮದು ಮಾಡಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ವೋಕಲ್ ಫಾರ್ ಲೋಕಲ್ ಪ್ರಸಿದ್ಧಿಯಾಗುತ್ತಿದೆ. ರಕ್ಷಾ ಬಂಧನವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಹ್ಯಾಂಡ್ಲೂಮ್ ಉತ್ಮನ್ನಗಳನ್ನು ಹೆಚ್ಚಾಗಿ ಬಳಸಿ ಎಂದು ಕರೆ ನೀಡಿದ ಪ್ರಧಾನಿ, ನಮ್ಮ ದೇಶೀಯ ವಸ್ತುಗಳನ್ನು ಬಳಸುವುದರಿಂದ ನಮ್ಮ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಸಣ್ಣ, ಗುಡಿ ಕೈಗಾರಿಕೆಗಳು ಅಭಿವೃದ್ಧಿ ಪಥದಲ್ಲಿವೆ ಎಂದರು.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಾರ್ಗಿಲ್ ವಿಜಯ ದಿವಸದಂದು 1999ರಲ್ಲಿ ನಮ್ಮ ದೇಶದ ರಕ್ಷಣೆಗೆ ಬಲವಾಗಿ ನಿಂತ ನಮ್ಮ ಸೇನಾ ಪಡೆಗಳ ಧೈರ್ಯ ಹಾಗೂ ನಿಖರತೆಯನ್ನು ನೆನೆಯೋಣ. ಅವರ ಶೌರ್ಯ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ. ಮನ್ ಕೀ ಬಾತ್ನಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳು ಬಂದಿವೆ. ಗ್ರಾಮೀಣ ಪ್ರದೇಶಗಳ ಜನ ಮುಂದೆ ಬರುತ್ತಿದ್ದಾರೆ ಎಂದರು. ಇದೇ ವೇಳೆ ಪ್ರಧಾನಿ ಮೋದಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಹರಿಯಾಣದ ಪಾಣಿಪತ್ನ ಕೃತಿಕಾ ಎಂಬ ವಿದ್ಯಾರ್ಥಿನಿಯ ಜತೆ ಮಾತನಾಡಿ, ಅಭಿನಂದನೆ ಸಲ್ಲಿಸಿದರು.
On Kargil Vijay Diwas, we remember the courage and determination of our armed forces, who steadfastly protected our nation in 1999. Their valour continues to inspire generations.
Will speak more about this during today’s #MannKiBaat, which begins shortly. #CourageInKargil
— Narendra Modi (@narendramodi) July 26, 2020