ಬೆಂಗಳೂರು : ಬೆಂಗಳೂರಿನ ಇಟ್ಟುಮಡುವಿನಲ್ಲಿರುವ ಮಂಜುನಾಥ ವೈನ್ಸ್ ಅಂಗಡಿಯ ಶಟರ್ಅನ್ನು ವೆಲ್ಡಿಂಗ್ ಮಿಷನ್ನಿಂದ ಕೊರೆದು ಒಳಗೆ ನುಗ್ಗಿ 90,000 ರೂಪಾಯಿ ನಗದು ದೋಚಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ದೂರು ದಾಖಲಾದ ಮೂರು ಗಂಟೆಗಳಲ್ಲೇ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮತ್ತು ಎಸಿಪಿ ಶ್ರೀನಿವಾಸಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಕೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜನಾರ್ಧನ್, ಸಬ್ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಮತ್ತು ತಂಡದವರು ಪ್ರಕರಣದ ತನಿಖೆ ನಡೆಸಿದ್ದಾರೆ. ಹರೀಶ್ ಎಂಬ ಆರೋಪಿಯನ್ನು ಬಂಧಿಸಿ ಕಳುವಾಗಿದ್ದ ಹಣವನ್ನು ಜಪ್ತಿಪಡಿಸಿಕೊಂಡಿದ್ದಾರೆ.