ಕೊಚ್ಚಿ: ಖದೀಮನಿಗೆ ಕಳ್ಳತನ ಮಾಡಲು ಒಂದು ನಿರ್ಧಿಷ್ಟವಾದ ಜಾಗ ಎಂಬುದೇ ಇಲ್ಲ. ಎಲ್ಲಿ ತನ್ನ ಕೃತ್ಯ ಸಾಧಿಸಲು ಅನುಕೂಲಕರ ವಾತಾವರಣ ಇರುತ್ತದೆಯೋ ಅಲ್ಲೆಲ್ಲ ತನ್ನ ಕೈಚಳಕ ತೋರುವುದೇ ಕಳ್ಳನ ಕರಾಮತ್ತು. ಆದರೆ, ಈ ವರದಿಯಲ್ಲಿ ಬರುವ ಕಳ್ಳನ ಸ್ವಭಾವ ಇದೆಲ್ಲದಕ್ಕಿಂತ ವಿಭಿನ್ನ. ಏಕೆಂದರೆ ಈತ ಕೇವಲ ಒಂದು ಏರಿಯಾ ಬಿಟ್ಟು ಬೇರೆ ಏರಿಯಾ ಕಡೆ ತಲೆ ಹಾಕಿಯೂ ಮಲಗಲ್ಲ. ಅನೇಕ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದರು ಸಹ ತನ್ನ ಕೃತ್ಯವನ್ನು ಮಾತ್ರ ನಿಲ್ಲಿಸಿಲ್ಲ. ಇಂತಹ ವಿಚಿತ್ರ ಕಳ್ಳನ ಇಂಟೆರೆಸ್ಟಿಂಗ್ ಕಹಾನಿ ನಿಮ್ಮ ಮುಂದಿದೆ.
ನಟೋರಿಯಸ್ ಖದೀಮನ ಹೆಸರು ಮರಿಯಾರ್ ಪೂಥಮ್. ಕೊಚ್ಚಿಯ ಎರ್ನಾಕುಲಂ ಉತ್ತರ ಭಾಗವೇ ಈತನ ಫೇವರಿಟ್ ಏರಿಯಾವಾಗಿದೆ. ಇಲ್ಲಿನ ಮನೆಗಳೇ ಈತನ ಟಾರ್ಗೆಟ್. ಅನೇಕ ಬಾರಿ ಪೊಲೀಸರಿಗೆ ಕೈಗೆ ಸಿಕ್ಕಿ ಜೈಲುಪಾಲಾಗಿ ಮರಳಿ ಬಂದಾಗಲೂ ತನ್ನ ಕೆಲಸ ಮಾತ್ರ ನಿಲ್ಲಿಸಿಲ್ಲ. ಆರು ತಿಂಗಳ ಹಿಂದಷ್ಟೇ ಮರಿಯಾರ್ ಜೈಲಿನಿಂದ ಹೊರಬಂದಿದ್ದ. ಎರ್ನಾಕುಲಂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅನೇಕ ಮನೆಗಳಲ್ಲಿ ಮರಿಯಾರ್ ತನ್ನ ಕೈಚಳಕ ತೋರಿದ್ದಾನೆ. ಈತ ಜೈಲಿನಿಂದ ಬಿಡುಗಡೆಯಾದಾಗಿನಿಂದ ಈ ಏರಿಯಾದ ಜನರಿಗೆ ಸರಿಯಾದ ನಿದ್ದೆಯಿಲ್ಲದಂತಾಗಿದೆ.
ಇದನ್ನೂ ಓದಿ: ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!
62 ವರ್ಷದ ಮರಿಯಾರ್ ಪೂಥಮ್ನ ಮೂಲ ಹಸರು ಜಾನ್ಸನ್. ಈತ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮಾರ್ತಾಂಡಂ ನಿವಾಸಿ. ಕೇವಲ ಒಂದೇ ಏರಿಯಾದಲ್ಲಿ ಮರಿಯಾರ್ ಏಕೆ ಕಳ್ಳತನ ಮಾಡುತ್ತಾನೆ ಎಂಬ ಪ್ರಶ್ನೆ ಹಿಂದೆ ಸಾಕಷ್ಟು ಉತ್ತರಗಳಿವೆ. ಅದರಲ್ಲೂ ಪ್ರಖ್ಯಾತ ಉತ್ತರವೆಂದರೆ ಏರಿಯಾ ವ್ಯಾಪ್ತಿಯಲ್ಲಿರುವ ಬರುವ ಠಾಣೆಯ ಪೊಲೀಸ್ ಅಧಿಕಾರಿ ಮೇಲಿನ ದ್ವೇಷಕ್ಕೆ ಹೀಗೆ ಮಾಡುತ್ತಿದ್ದಾನೆಂದು ಹೇಳಲಾಗಿದೆ.
ಆದರೆ, ಪೊಲೀಸ್ ಅಧಿಕಾರಿಗಳು ಹೇಳುವುದೇ ಬೇರಯಾಗಿದೆ. ದ್ವೇಷವೇ ಆಗಿದ್ದರೆ ಆತ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಏರಿಯಾದಲ್ಲಿ ಕದಿಯಬೇಕಿತ್ತು. ಆದರೆ, ಎಸ್ಆರ್ಎಂ ರಸ್ತೆ, ಲಿಸಿ ಆಸ್ಪತ್ರೆ ವಲಯ ಮತ್ತು ಕೊಲಥ್ ರಸ್ತೆಯಲ್ಲಿ ಮಾತ್ರ ಖದೀಮ ತನ್ನ ಕರಾಮತ್ತು ತೋರಿಸುತ್ತಿದ್ದಾನೆ. ಏಕೆಂದರೆ ಈ ಏರಿಯಾಗಳಲ್ಲಿ ಆತನಿಗೆ ಅನುಕೂಲಕರ ವಾತಾವರಣವಿದೆ. ಅಲ್ಲದೆ, ಸುಮಾರು 50 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾನೆ. ಏರಿಯಾದ ಪ್ರತಿಯೊಂದು ಸ್ಥಳ ಹಾಗೂ ಮೂಲೆಗಳು ಆತನಿಗೆ ಚೆನ್ನಾಗಿ ತಿಳಿದಿದೆ ಎನ್ನುತ್ತಾರೆ ಸಹಾಯಕ ಸಬ್ ಇನ್ಸ್ಪೆಕ್ಟರ್ ವಿನೋದ್ ಕೃಷ್ಣ.
ಬಾಲ್ಯದಲ್ಲೇ ಚಿಂದಿ ಹಾಯುವ ಬಾಲಕನಾಗಿ ಇಲ್ಲಿಗೆ ಬಂದು ನೆಲೆಸಿದ ಮರಿಯಾರ್ ಮೊದಲೇ ಹೇಳಿದಂತೆ ಕೆಲವೇ ಏರಿಯಾಗಳಲ್ಲಿ ಚಿಂದಿ ಹಾಯುತ್ತಿದ್ದನು. ಹೀಗಾಗಿ ಆತ ಆ ಸ್ಥಳಗಳಿಗೆ ತುಂಬಾ ಒಗ್ಗಿಕೊಂಡಿದ್ದಾರೆ. ಪ್ರತಿಯೊಂದು ಸ್ಥಳದ ಬಗ್ಗೆ ಆತನಿಗೆ ಪಕ್ಕಾ ಮಾಹಿತಿ ಇದೆ ಎಂದು ವಿನೋದ್ ಹೇಳಿದ್ದಾರೆ.
2000ನೇ ಇಸವಿಯಲ್ಲಿ ಮೊದಲ ಬಾರಿಗೆ ಮರಿಯಾರ್ನನ್ನು ಬಂಧಿಸಲಾಗಿತ್ತಂತೆ. ಬಳಿಕ ಬಿಡುಗಡೆಯಾಗಿ ಬಂದು ಆತ ತನ್ನ ಕಸುಬು ಮುಂದುವರಿಸಿದ. ಇದುವೆರಗೂ ಈತ ಸುಮಾರು 100 ಗ್ರಾಂ ಚಿನ್ನಾಭರಣ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತನ್ನ ಜೇಬಿಗೆ ಇಳಿಸಿದ್ದಾನೆ. ತನ್ನ ಕಸುಬಿನಲ್ಲಿ ಈತ ಅದೆಷ್ಟು ನಿಪುಣನೆಂದರೆ ಕೆಲವೊಮ್ಮೆ ಹಾಸಿಗೆ ಮೇಲೆ ಮಲಗಿದ್ದವರ ಕುತ್ತಿಗೆ ಮತ್ತು ಕೈಯಲ್ಲಿದ್ದ ಚಿನ್ನದ ಸರಗಳನ್ನು ದೋಚಿರುವ ಉದಾಹರಣೆಗಳಿವೆ.
ಪೊಲೀಸರ ಪ್ರಕಾರ, ಹಗಲಿನ ವೇಳೆಯಲ್ಲಿ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವ ಮನೆಯನ್ನು ಗುರುತಿಸುವುದು ಮರಿಯಾರ್ ಕಾರ್ಯವಿಧಾನವಾಗಿದೆ. ಜನವಸತಿಯಿಲ್ಲದ ಮನೆಯಾಗಿದ್ದರೆ, ಬೆಳಗ್ಗೆ ಮನೆಯ ಮೇಲೆಯೇ ವಿಶ್ರಾಂತಿ ಪಡೆದು ರಾತ್ರಿಯಲ್ಲಿ ತನ್ನ ಕಾರ್ಯ ಆರಂಭಿಸುತ್ತಾನೆ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಮರಿಯಾರ್ ವೇಗದ ಓಟಗಾರನಾಗಿರುವುದರಿಂದ ಹಿಡಿಯಲು ಸಹ ಸುಲಭವಲ್ಲ. ವೇಗವಾಗಿ ಮತ್ತು ಕಾಂಪೌಂಡ್ ಗೋಡೆಗಳ ಮೇಲೆ ಓಡುವುದರಲ್ಲೂ ಈತ ಹೆಸರುವಾಸಿಯಾಗಿದ್ದಾನೆ.
ಮರಿಯಾರ್ ಕುಟುಂಬ ಈಗಲೂ ಮಾರ್ತಾಂಡಂನಲ್ಲೇ ನೆಲೆಸಿದೆ. ಪ್ರತಿಯೊಂದು ಕಾರ್ಯಾಚರಣೆಯ ಬಳಿಕ ಮರಿಯಾರ್ ತನ್ನ ಪತ್ನಿಗೆ ಮಿಸ್ ಕಾಲ್ ಕೊಡುತ್ತಾನೆ. ಒಂದು ವೇಳೆ ಮಿಸ್ಕಾಲ್ ಬರದಿದ್ದರೆ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆಂದು ಅರ್ಥ ಮತ್ತು ಅವರ ದಿನನಿತ್ಯದ ಪ್ರಕ್ರಿಯೆಯು ಆಗಿದೆ. ಜನರು ಮನೆಯಲ್ಲಿರುವಾಗಲೇ ಬಾಗಿಲು ಮುರಿಯುವುದರಲ್ಲಿ ಪರಿಣಿತನಾಗಿರುವ ಮರಿಯಾರ್ ಈವರೆಗೂ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ ಎಂಬುದು ಆತನ ಒಳ್ಳೆಯ ಗುಣವನ್ನು ತೋರುತ್ತಿದೆ. ಈಗಲೂ ಆತನ ಹಿಡಿಯುವಿಕೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: 2021 ಇನ್ನೂ ಭೀಕರವಾಗಿರುತ್ತೆ! ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ ಭವಿಷ್ಯ!
ಸೆಕ್ಸ್ ಡಾಲ್ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!
ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು ಶಾಕ್!
ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!