More

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ

    ಮಧುಸೂಚನ ಕೆ. ಹೂವಿನಹಡಗಲಿ
    ಪಟ್ಟಣದಲ್ಲಿ ನಿರ್ಮಾಣವಾಗಿರುವ ತಾಲೂಕು ಕ್ರೀಡಾಂಗಣದಲ್ಲಿ ವಿಶಾಲವಾದ ಸ್ಥಳವೇನೋ ಇದೆ. ಆದರೆ, ಮೂಲ ಸೌಕರ್ಯಗಳ ಕೊರತೆಯೂ ಇದೆ.

    ನಿತ್ಯ ಇಲ್ಲಿಗೆ ಬರುವ ಕ್ರೀಡಾಪಟುಗಳು, ವಾಯು ವಿಹಾರಿಗಳು, ಸಾರ್ವಜನಿಕರ ಸಂಖ್ಯೆ ಹೆಚ್ಚೇ ಇದೆ. ಅಗತ್ಯ ಸೌಕರ್ಯಗಳು ಇಲ್ಲದ ಕಾರಣ ಅವರಿಗೆ ನಿರಾಸೆಯಾಗುತ್ತಿದೆ. ಸ್ವಚ್ಚತೆಯ ಕೊರತೆ ಅಧಿಕವಾಗಿದೆ. ನೆರಳಿಗೆಂದು ಅಳವಡಿಸಿರುವ ಮೇಲಿನ ಶೀಟ್‌ಗಳಲ್ಲಿ ಕಿಂಡಿಗಳು ಬಿದ್ದಿವೆ. ಕೆಲವು ಶೀಟ್‌ಗಳು ಕಿತ್ತಿವೆ. ರಾಜ್ಯ ಮಟ್ಟದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಗತ್ಯ ಸಲಕರಣೆಗಳು ಇಲ್ಲಿಲ್ಲ. ವ್ಹಾಲಿಬಾಲ್ ಅಂಕಣವಿದ್ದರೂ, ಸಂಜೆಯ ನಂತರ ಅಭ್ಯಾಸ ಮಾಡಲು ಬೆಳಕಿನ ವ್ಯವಸ್ಥೆ ಇಲ್ಲ.

    ಉದ್ದಜಿಗಿತ, ಎತ್ತರಜಿಗಿತ, ಗುಂಡುಎಸೆತ, ಚಕ್ರಎಸೆತ ಮೊದಲಾದ ಕ್ರೀಡೆಗಳನ್ನು ಅಭ್ಯಾಸ ಮಾಡಲು ಸರಿಯಾದ ಅಂಕಣಗಳಿಲ್ಲ, ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಕಚೇರಿ ಮತ್ತು ಕೊಠಡಿಗಳ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಕ್ರೀಡಾಂಗಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಪಂದನೆ ಸಿಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಕ್ರೀಡಾಪಟುಗಳು,

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
    ಹೂವಿನಹಡಗಲಿ ಸ್ಟೇಡಿಯಂಗೆ ಹೊಂದಿಕೊಂಡಿರುವ ಒಳಕ್ರೀಡಾಂಗಣ.

    ಮುಚ್ಚಿದ ವ್ಯಾಯಾಮ ಶಾಲೆ

    ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಶಾಲೆಯ ಆವರಣದಲ್ಲಿ 2007 ರಲ್ಲಿ ನಿರ್ಮಾಣವಾಗಿದ್ದ ವ್ಯಾಯಾಮ ಶಾಲೆ ಈಗ ಸ್ಥಗಿತಗೊಂಡಿದೆ. ಪ್ರಾರಂಭದಲ್ಲಿ 50ಕ್ಕಿಂತ ಹೆಚ್ಚು ಜನ ಸದಸ್ಯರಿದ್ದರು. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿತು. ಮತ್ತೆ ಆರಂಭವಾಗಲೇ ಇಲ್ಲ. ರಾಷ್ಟ್ರ ಮತ್ತು ಅಂತಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟುಗಳು ದೈನಂದಿನ ಅಭ್ಯಾಸಕ್ಕಾಗಿ ಖಾಸಗಿ ವ್ಯಾಯಾಮ ಶಾಲೆಗಳಿಗೆ ತೆರಳುತ್ತಿದ್ಧಾರೆ. ಅಧಿಕ ಶುಲ್ಕ ಪಾವತಿಸುವುದು ಅವರಿಗೆ ಅನಿವಾರ್ಯವಾಗಿದೆ.

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
    ಹೂವಿನಹಡಗಲಿ ಕ್ರೀಡಾಂಗಣದಲ್ಲಿರುವ ನಿರುಪಯುಕ್ತ ಶೌಚಗೃಹಗಳು.

    ಸಾಮಗ್ರಿಗಳನ್ನು ಕ್ರೀಡಾಪಟುಗಳೇ ತರಬೇಕು

    ತಾಲೂಕು ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆಂದು ಬರುವ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುವಾಗ ತಮ್ಮ ತಮ್ಮ ಶಾಲೆ, ಕಾಲೇಜುಗಳಿಂದ ಇಲ್ಲವೇ ಸ್ವಂತದ್ದನ್ನು ಕ್ರೀಡಾ ಪರಿಕರಗಳನ್ನು ತೆಗೆದುಕೊಂಡು ಅನಿವಾರ್ಯತೆ ಇದೆ. ಇದು ಅಭ್ಯಾಸವೂ ಆಗಿಹೋಗಿದೆ.

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
    ಸ್ಟೇಡಿಯಂಗೆ ಅಳವಡಿಸಿರುವ ಶೀಟ್‌ಗಳು ಕಿತ್ತಿರುವುದು.

    ಸ್ವಚ್ಚತೆ ಕಾಣದ ಒಳಾಂಗಣ

    ತಾಲೂಕು ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಒಳಾಂಗಣದಲ್ಲಿ ಸ್ವಚ್ಚತೆ ಇಲ್ಲದ ಕಾರಣ ದುರ್ವಾಸನೆ ಬೀರುತ್ತಿದೆ. ಇಲ್ಲಿರುವ ಎರಡು ಕೊಠಡಿಗಳಲ್ಲೂ ಮಲಿನಗೊಂಡಿವೆ. ಅಪಾರ ಪ್ರಮಾಣದಲ್ಲಿ ಧೂಳು ತುಂಬಿಕೊಂಡಿದೆ. ಅಭ್ಯಾಸಕೆಂದು ಬರುವ ಕ್ರೀಡಾಪಟುಗಳು ತಮಗೆ ಬೇಕಾದ ಸ್ಥಳವನ್ನು ಶುಚಿ ಮಾಡಿಕೊಂಡು ಅಭ್ಯಾಸ ಮಾಡಬೇಕು. ಜನರು ಕೂಡ ಅಷ್ಟೇ ಜಾಗ ಶುಚಿ ಮಾಡಿಕೊಂಡು ಕುಳಿತುಕೊಳ್ಳಬೇಕು.

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
    ಹೂವಿನಹಡಗಲಿ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಶಾಲೆಯ ಆವರಣದಲ್ಲಿರುವ ವ್ಯಾಯಾಮ ಶಾಲೆಯ ಮುಚ್ಚಿರುವುದು.

    ನಿರುಪಯುಕ್ತ ಶೌಚಗೃಹಗಳು

    ತಾಲೂಕು ಕ್ರೀಡಾಂಗಣದಲ್ಲಿ ಪುರಸಭೆಯಿಂದ ನಿರ್ಮಾಣ ಮಾಡಿರುವ ನೀರಿನ ಓವರ್‌ಹೆಡ್‌ಟ್ಯಾಂಕ್‌ಗಳ ಕೆಳಭಾಗದಲ್ಲೇ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿಯ ತನಕ ಅವುಗಳನ್ನು ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಮಾಡಿಲ್ಲ. ನಿತ್ಯ ಬರುವ ಸಾರ್ವಜನಿಕರಿಗೆ ಅವುಗಳನ್ನು ಬಳಸಿಕೊಳ್ಳುತ್ತಿಲ್ಲ. ಬದಲಿದೆ ಗಿಡಗಳ ಕೆಳಗೆ, ಗೋಡೆಗಳ ಬದಿಗೆ ಮೂತ್ರ ವಿಸರ್ಜನೆ ಮಾಡುವ ಸ್ಥಿತಿ ಬಂದೊದಗಿದೆ. ಇದರಿಂದ ವಾತಾವರಣವೂ ಹಾಳಾಗುತ್ತಿದೆ.

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
    ಹೂವಿನಹಡಗಲಿ ಒಳಕ್ರೀಡಾಂಗಣದಲ್ಲಿರುವ ಕೊಠಡಿಗಳಲ್ಲಿ ಶುಚಿತ್ವ ಇಲ್ಲದಿರುವುದು.
    ಕುಡಿಯುವ ನೀರಿನ ಸೌಲಭ್ಯವಿಲ್ಲ

    ಕ್ರೀಡಾಂಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕ್ರೀಡಾಂಗಣದಲ್ಲಿರುವ ಪುರಸಭೆಯ ನೀರಿನ ಓವರ್‌ಹೆಡ್‌ಟ್ಯಾಂಕ್‌ನಿಂದಲೇ ಪಟ್ಟಣಕ್ಕೆ ನೀರು ಸರಬರಾಜಾಗುತ್ತದೆ. ಆದರೆ, ಕ್ರೀಡಾಂಗಣದಲ್ಲಿ ಇಲ್ಲಿಯ ತನಕ ನಳ ಅಳವಡಿಸಿಲ್ಲ. ಈ ಬಗ್ಗೆ ಪುರಸಭೆಯವರಾಗಲಿ, ಕ್ರೀಡಾ ಇಲಾಖಾಧಿಕಾರಿಗಳಾಗಲಿ ಕ್ರಮಕೈಗೊಳ್ಳಲು ಮುಂದಾಗಲಿಲ್ಲ.

    ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
    ಬಳಕೆಯಾಗದಿರುವ ಕ್ರೀಡಾ ಸಾಮಗ್ರಿಗಳು.
    ಅಪಾಯ ಒಡ್ಡಬಹುದು ವಿದ್ಯುತ್ ತಂತಿಗಳು

    ತಾಲೂಕು ಕ್ರೀಡಾಂಗಣದಲ್ಲಿ 9 ದೀಪದ ಕಂಬಗಳಿದ್ದು ಅವುಗಳನ್ನು ಇತ್ತೀಚೆಗಷ್ಟೇ ದುರಸ್ತಿಗೊಳಿಸಲಾಗಿದೆ. ಆದರೆ, ಆ ಕಂಬಗಳಲ್ಲಿನ ದೀಪಗಳಿಗೆ ಸಂಪರ್ಕ ಕಲ್ಪಿಸುವ ತಂತಿಗಳು ಎಲ್ಲೆಂದರಲ್ಲಿ ತುಂಡಾಗಿವೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಈ ಕಡೆ ಅಧಿಕಾರಿಗಳು ಗಮನ ಹರಿಸಿ, ತುರ್ತು ಅಗತ್ಯವಿರುವ ಕಡೆ ದುರಸ್ತಿ ಮಾಡಿಸಬೇಕು. ಇಲ್ಲವಾದರೆ ಈ ತಂತಿಗಳಿಂದ ಅಪಾಯ ಸಂಭವನೀಯ.

    ಕೆಸರು ಗದ್ದೆಯಂತಾಗುವ ಓಟದ ಅಂಕಣ

    ಮಳೆಗಾಲದಲ್ಲಿ ಕ್ರೀಡಾಂಗಣದ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಆ ಭಾಗದಲ್ಲಿ ಹೆಚ್ಚಿನ ಕಸ ತುಂಬಿಕೊಂಡಿದೆ. ಇದರಿಂದ ಮಳೆ ನೀರು ಕ್ರೀಡಾಂಗಣದಲ್ಲೇ ನಿಂತುಕೊಳ್ಳುತ್ತದೆ. ಇದರಿಂದಾ ಮೈದಾನ ಕೆಸರುಮಯವಾಗುತ್ತದೆ. ಈ ಕಾರಣಕ್ಕೆ ಮಳೆಗಾಲದಲ್ಲಿ ಜನರು ಕ್ರೀಡಾಂಗಣದ ಕಡೆ ಸುಳಿಯುವುದಿಲ್ಲ. ಪಟ್ಟಣದ ವಿವಿಧೆಡೆ ರಸ್ತೆಗಳನ್ನು ಆಸರಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: ಆಟೋಟಕ್ಕೆ ಕೆಪಿಎಸ್ ಮೈದಾನವೇ ಆಸರೆ

    ಕಾಡುತ್ತಿದೆ ಪಾರ್ಕಿಂಗ್ ಸಮಸ್ಯೆ

    ದಿನ ನಿತ್ಯ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಸರಿಯಾದ ಸ್ಥಳಾವಕಾಶ ಇಲ್ಲದೆ ರಸ್ತೆಯ ಪಕ್ಕದಲ್ಲೇ ಬಿಟ್ಟು ತೆರಳುತ್ತಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಭಾರಿ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಸಮಸ್ಯೆ ತಪ್ಪುತ್ತಿಲ್ಲ.

    ಕ್ರೀಡಾಂಗಣದಲ್ಲಿ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಲು ಎಲ್ಲ ವಿದ್ಯುತ್ ಕಂಬಗಳ ದೀಪಗಳ ದುರಸ್ತಿ ಕೆಲಸವನ್ನು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಸೌಲಭ್ಯಗಳನ್ನು ಕಲ್ಪಿಸಿಲಾಗುವುದು.
    ಹರಿಸಿಂಗ್ ರಾಠೋಡ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ

    ಕ್ರೀಡಾಂಗಣದಲ್ಲಿನ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯ ತನಕ ಯಾವೊಂದು ಸೌಲಭ್ಯ ದೊರೆತಿಲ್ಲ. ಕ್ರೀಡಾಂಗಣಕ್ಕೆ ಬರುವ ಸಾರ್ವಜನಿಕರ ವಾಹನಗಳನ್ನು ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಇನ್ನೂ ಕಲ್ಪಿಸಿಕೊಟ್ಟಿಲ್ಲ.
    ರಾಘವೇಂದ್ರ ಬಾರ್ಕಿ, ಹೂವಿನಹಡಗಲಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts