ಲಕ್ಷ್ಮೇಶ್ವರ: ಗೃಹಲಕ್ಷಿಯೋಜನೆಗೆ ಅರ್ಜಿ ಸಲ್ಲಿಸುವಲ್ಲಿ ಉಂಟಾಗಿದ್ದ ತೊಡಕುಗಳನ್ನು ಸರಳೀಕರಣಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿ ಸಲ್ಲಿಕೆ ಸುಸೂತ್ರವಾಗಿ ಸಾಗಿದೆ.
ಕೆಲವು ಕಡೆ ತಾಂತ್ರಿಕ ತೊಂದರೆ, ಸರ್ವರ್ ಡೌನ್ನಿಂದ ನೂಕುನುಗ್ಗಲು ಉಂಟಾಗಿದ್ದು ಕಂಡುಬಂದಿತು. ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಪಂ ಮತ್ತು ಗ್ರಾಮ ಒನ್ಗಳಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಪಟ್ಟಣದ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲೂ 300ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ.
ಪುರಸಭೆ, ತಾಲೂಕು ಪಂಚಾಯಿತಿ ಮತ್ತು ಎಪಿಎಂಸಿ ಕಟ್ಟಡದಲ್ಲಿ ಪ್ರಾರಂಭಿಸಿದ ಸೇವಾ ಕೇಂದ್ರಗಳು ಶನಿವಾರ ತಾಂತ್ರಿಕ ತೊಂದರೆಯಿಂದ ಅರ್ಜಿ ಸ್ವೀಕೃತಿ ಪ್ರಾರಂಭಿಸಿಲ್ಲ. ಇದರಿಂದ ಪಟ್ಟಣದಲ್ಲಿ ಕಾರ್ಯಾರಂಭ ಮಾಡಿದ್ದ ಕೇವಲ 2 ಕರ್ನಾಟಕ ಒನ್ ಕೇಂದ್ರಗಳಲ್ಲಿ ನೂಕುನುಗ್ಗಲು ಕಂಡುಬಂದಿತು. ಈ ವೇಳೆ ಗೊಂದಲಕ್ಕೊಳಗಾದ ಕೇಂದ್ರದ ಸಿಬ್ಬಂದಿ ಬಾಗಿಲು ಬಂದ್ ಮಾಡಿ ಜಮಾಯಿಸಿದ್ದ ಎಲ್ಲರಿಗೂ ಪಾಳಿ ಚೀಟಿ ನೀಡಿ ಸರದಿಯಲ್ಲಿ ನಿಲ್ಲಿಸಿ ಅರ್ಜಿ ಸ್ವೀಕರಿಸಲಾಯಿತು.
ಶನಿವಾರ ಪಟ್ಟಣದಲ್ಲಿ ಕರ್ನಾಟಕ ಒನ್ ಕೇಂದ್ರದಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗಿದ್ದು, ಸೋಮವಾರದಿಂದ ಎಲ್ಲ ಕೇಂದ್ರಗಳಲ್ಲಿ ಅರ್ಜಿ ಸ್ವೀಕೃತಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿಲ್ಲ. ಆದ್ದರಿಂದ ಯಾರೂ ಅವಸರ, ಆತಂಕಕ್ಕೊಳಗಾಗಬೇಡಿ ಎಂದು ತಹಸೀಲ್ದಾರ್ ಕೆ. ಆನಂದಶೀಲ ಹೇಳಿದರು.
ಜು. 19ರಿಂದ 21ರವರೆಗೆ ತಾಂತ್ರಿಕ ತೊಂದರೆ, ಸರ್ವರ್ ಸಮಸ್ಯೆಯಿಂದ ಅರ್ಜಿಗಳ ಸ್ವೀಕೃತಿ ಸಂಖ್ಯೆ 3000ಕ್ಕಿಂತ ಕಡಿಮೆಯಾಗಿತ್ತು. ಶನಿವಾರವಷ್ಟೇ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಾದ್ಯಂತ 4000ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಎಲ್ಲಿಯೂ ಸಮಸ್ಯೆ ಕಂಡು ಬಂದಿಲ್ಲ.
-ಮೃತ್ಯುಂಜಯ ಗುಡ್ಡದನ್ವೇರಿ, ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಅಧಿಕಾರಿ