ಬೆಂಗಳೂರು: ಆಭರಣ ಅಂಗಡಿ ಮಾಲೀಕ ಡೆಲಿವರಿಗೆ ನೀಡಿದ್ದ ಚಿನ್ನಾಭರಣವನ್ನು ನೌಕರ, ದರೋಡೆ ಎಂಬ ಸಿನಿಮೀಯ ಕಥೆ ಕಟ್ಟಿ ಕೊನೆಗೆ ಹಲಸೂರು ಗೇಟ್ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.
ರಾಜಸ್ಥಾನ ಮೂಲದ ಲಾಲ್ಸಿಂಗ್ (23) ಮತ್ತು ಆತನ ಸಹಚರ ರಾಜ್ಪಾಲ್ (24) ಬಂಧಿತರು. ಆರೋಪಿಗಳಿಂದ 75 ಲಕ್ಷ ರೂ. ಮೌಲ್ಯದ 1 ಕೆಜಿ 262 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಗರ್ತಪೇಟೆ ಜುವೆಲರಿ ಅಂಗಡಿ ಮಾಲೀಕ ಅಭಿಷೇಕ್ ಜೈನ್ ಎಂಬಾತ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರ್ತಪೇಟೆಯ ಜುಲವೆಲರಿ ಅಂಗಡಿ ಮಾಲೀಕ ಅಭಿಷೇಕ್ ಜೈನ್ ಬಳಿ 8 ತಿಂಗಳ ಹಿಂದೆ ಸೇಲ್ಸ್ಮನ್ ಆಗಿ ಲಾಲ್ ಸಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಕಡಿಮೆ ಅವಧಿಯಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ. ಸೆ.28ರಂದು ಆಂಧ್ರಪ್ರದೇಶದ ನೆಲ್ಲೂರಿನ ಮುಖೇಶ್ ಮತ್ತು ಶುಭಂ ಗೋಲ್ಡ್ ಜುವೆಲರಿ ಅಂಗಡಿಗೆ ಡೆಲಿವರಿ ನೀಡುವಂತೆ ನೌಕರ ಲಾಲ್ಸಿಂಗ್ಗೆ 1 ಕೆ.ಜಿ. 262 ಗ್ರಾಂ ಚಿನ್ನಾಭರಣಗಳನ್ನು ಮಾಲೀಕ ಅಭಿಷೇಕ್ ಜೈನ್ ನೀಡಿದ್ದರು.
ಆರೋಪಿ ನೆಲ್ಲೂರಿನ ಕಾಳಹಸ್ತಿಗೆ ತೆರಳಿ ಮಾಲೀಕರಿಗೆ ಕರೆ ಮಾಡಿ ಯಾರೋ ದುಷ್ಕರ್ಮಿಗಳು ನನ್ನ ಹಣೆಗೆ ಗನ್ ಇರಿಸಿ, ಕೈಗೆಗಳಿಗೆ ಚಾಕುವಿನಿಂದ ಹಲ್ಲೆ ಮಾಡಿ ಚಿನ್ನಾಭರಣವಿದ್ದ ಬ್ಯಾಗ್ ದೋಚಿದರು ಎಂದು ಹೇಳಿದ್ದಾನೆ. ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಡಿದ್ದ. 2 ದಿನಗಳ ಕಾಲ ಲಾಲ್ಸಿಂಗ್ ಮಾಲೀಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಅನುಮಾನಗೊಂಡ ಅಭಿಷೇಕ್ ಜೈನ್, ಖುದ್ದು ಕಾಳಹಸ್ತಿಗೆ ತೆರಳಿ ಲಾಲ್ ಸಿಂಗ್ಗಾಗಿ ಹುಡುಕಿ ಬೆಂಗಳೂರಿಗೆ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆಗೆ ಇಳಿದ ಇನ್ಸ್ಪೆಕ್ಟರ್ ಹನುಮಂತ ಭಜಂತ್ರಿ ನೇತೃತ್ವದ ತಂಡ, ಆರೋಪಿ ಲಾಲ್ಸಿಂಗ್ನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಗನ್ ಪಾಯಿಂಗ್, ಚಾಕುವಿನಿಂದ ಹಲ್ಲೆ ಕಥೆ ಹೇಳಿದ್ದ.
ಅನುಮಾನ ಬಂದು ಪೊಲೀಸ್ ಶೈಲಿನಲ್ಲಿ ವಿಚಾರಣೆ ನಡೆಸಿದಾಗ ದರೋಡೆ ಡ್ರಾಮಾದ ಅಸಲಿ ಕಥೆ ಬಾಯ್ಬಿಟ್ಟಿದ್ದ. ಲಾಲ್ ಸಿಂಗ್ನನ್ನು ನೀಡಿದ ಮಾಹಿತಿ ಮೇರೆಗೆ ರಾಜಸ್ಥಾನದಲ್ಲಿ ಆಭರಣಗಳೊಂದಿಗೆ ತಲೆಮರೆಸಿಕೊಂಡಿದ್ದ ರಾಜ್ಪಾಲ್ನನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.