ಶಿಗ್ಗಾಂವಿ: ಅನಾಥಾಶ್ರಮದ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಬನ್ನೂರ ಗ್ರಾಮದ ರತ್ನವ್ವ ಹಣಮಂತಪ್ಪ ಪೊಲೀಸಗೌಡ್ರ (65) ಮೃತ ವೃದ್ಧೆ.
ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮಕ್ಕಳಿಂದ ನಿರ್ಲಕ್ಷ್ಯ್ಕೊಳಗಾಗಿ ಮನೆ ತೊರೆದ ಇವರು, 10 ತಿಂಗಳಿಂದ ಪಟ್ಟಣದ ಮೃತ್ಯುಂಜಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. 15 ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಇವರನ್ನು ಪಟ್ಟಣದ ಮೃತ್ಯುಂಜಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ನಿಧನ ಹೊಂದಿದರು. ವಿಷಯವನ್ನು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದರೂ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ. ಆಗ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಮೃತ್ಯುಂಜಯ ಆಸ್ಪತ್ರೆ ವೈದ್ಯ ದಂಪತಿ ಡಾ. ರಾಣಿ ಮತ್ತು ಡಾ. ಮೃತ್ಯುಂಜಯ ತಿರ್ಲಾಪುರ ಹಾಗೂ ಬಸವರಾಜ ಬೊಮ್ಮಾಯಿ ಅಭಿಮಾನಿಗಳ ಬಳಗದಿಂದ ವೀರಶೈವ ಸಂಪ್ರದಾಯದಂತೆ ಪಟ್ಟಣದ ಹಿಂದು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಡಾ. ಮೃತ್ಯುಂಜಯ ತಿರ್ಲಾಪುರ, ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ಕಾಶಿನಾಥ ಕಳ್ಳಿಮನಿ, ನರಹರಿ ಕಟ್ಟಿ, ನವೀನ ಮುಂಡಗೋಡ, ಮಂಜು ಪವಾರ, ಆಸ್ಪತ್ರೆ ಸಿಬ್ಬಂದಿ ಇದ್ದರು.
ಫೋಟೋ-28ಎಸ್ಜಿಎನ್01-ಶಿಗ್ಗಾಂವಿಯಲ್ಲಿ ಬುಧವಾರ ನಿಧನರಾದ ಅನಾಥಾಶ್ರಮದ ವೃದ್ಧೆಗೆ ಮೃತ್ಯುಂಜಯ ಆಸ್ಪತ್ರೆ ವೈದ್ಯ ಡಾ. ಮೃತ್ಯುಂಜಯ ತಿರ್ಲಾಪುರ ಪೂಜೆ ಸಲ್ಲಿಸಿದರು. ನರಹರಿ ಕಟ್ಟಿ, ಕಾಶಿನಾಥ ಕಳ್ಳಿಮನಿ, ನವೀನ ಮುಂಡಗೋಡ ಇದ್ದರು.