ಸವಣೂರ: ಮನೆಗೆ ಬೆಂಕಿ ಹೊತ್ತಿಕೊಂಡು ದನದ ಕೊಟ್ಟಿಗೆಯಲ್ಲಿದ್ದ ಮೇವು ಸುಟ್ಟು ಹಾನಿಯಾದ ಘಟನೆ ತಾಲೂಕಿನ ಕಾರಡಗಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಗ್ರಾಮದ ನಿವಾಸಿ ಮಂಜುನಾಥ ಅರಳಿಕಟ್ಟಿ ಎಂಬುವವರಿಗೆ ಸೇರಿದ ಹಳೆಯ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಹೊಗೆಯ ಪ್ರಮಾಣ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಆತಂಕಕ್ಕೆ ಒಳಗಾಗಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಪಂ ವತಿಯಿಂದ ನೀರು ಪೂರೈಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಹಾನಿ ತಪ್ಪಿದೆ. ಸ್ಥಳಕ್ಕೆ ಧಾವಿಸಿದ ಸವಣೂರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ದನಗಳಿಗೆ ಸಂಗ್ರಹಿಸಿದ ಮೇವು ಸಂಪೂರ್ಣ ಸುಟ್ಟು ಹೋಗಿದೆ. ಮನೆಯ ಕಟ್ಟಿಗೆ ಕಂಬಗಳಿಗೆ ಹಾನಿಯಾಗಿವೆ. ಕೊಟ್ಟಿಗೆಯಲ್ಲಿ ದನಗಳಿಲ್ಲದ ಕಾರಣ ಪ್ರಾಣಿ ಹಾನಿ ತಪ್ಪಿದೆ.
ಪಿಡಿಒ ಮಂಜುನಾಥ ಭೋವಿ, ಅಗ್ನಿಶಾಮಕ ದಳ ಠಾಣಾಧಿಕಾರಿ ಮಂಜುನಾಥ ಮೇಟಿ, ಸಿಬ್ಬಂದಿ ಮಂಜುನಾಥ ತವರಿ, ಸುರೇಶ ಗುಂಜಳ, ವಿನಯ ವಡೆರಟ್ಟಿ, ಸ್ಥಳೀಯ ಪ್ರಮುಖರು ಇದ್ದರು.