More

    ಕಿಂಡರ್ ಗಾರ್ಟನ್ ಮಾಲಕಿ ಮೃತದೇಹ ಬಾವಿಯಲ್ಲಿ ಪತ್ತೆ!

    ಉಳ್ಳಾಲ: ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಕಿಂಡರ್ ಗಾರ್ಟನ್ ಮಾಲಕಿಯ ಮೃತದೇಹ ಶುಕ್ರವಾರ ಮಧ್ಯಾಹ್ನ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ.

    ಉಳ್ಳಾಲ ಅಬ್ಬಕ್ಕ ವೃತ್ತ ಬಳಿಯ ನಿವಾಸಿ ಹರಿಣಾಕ್ಷಿ ಬಸವರಾಜ್(51) ಮೃತಪಟ್ಟವರು. ಮನೆಯಲ್ಲೇ ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಹೆಸರಿನಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ಮತ್ತು ಟ್ಯೂಷನ್ ತರಗತಿ ನಡೆಸುತ್ತಿದ್ದರು. ಪತಿ ಬಸವರಾಜ್ ಶಿವಮೊಗ್ಗದಲ್ಲಿ ವಕೀಲರಾಗಿದ್ದಾರೆ. ಇಬ್ಬರು ಪುತ್ರರೊಂದಿಗೆ ಅಬ್ಬಕ್ಕ ವೃತ್ತದ ಬಳಿಯಿರುವ ಮನೆಯಲ್ಲಿ ನೆಲೆಸಿದ್ದರು. ಹಿರಿಯ ಪುತ್ರ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರೆ, ಕಿರಿಯ ಪುತ್ರ ಅಲೋಶಿಯಸ್ ಕಾಲೇಜಲ್ಲಿ ಬಿಬಿಎ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾನೆ.

    ಶುಕ್ರವಾರ ಬೆಳಗ್ಗೆ ಹರಿಣಾಕ್ಷಿ ಮನೆಯಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಮಕ್ಕಳು ಹುಡುಕಾಟ ನಡೆಸಿ ಬಳಿಕ ಉಳ್ಳಾಲ ಪೊಲೀಸರಿಗೆ ವಿಷಯ ತಿಳಿಸಿದ್ದರು. ಹರಿಣಾಕ್ಷಿ ಧರಿಸುತ್ತಿದ್ದ ಚಪ್ಪಲಿ ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿ ಬಳಿ ಕಂಡು ಬಂದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಬಾವಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.

    ಸಹಾಯಹಸ್ತ ಚಾಚಿದ್ದರು: ಹರಿಣಾಕ್ಷಿ ಅವರಿಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಕರೊನಾ ಸಂದರ್ಭ ಸ್ಥಳೀಯ ನಿವಾಸಿಗಳಿಗೆ ಜಾತಿ, ಧರ್ಮ ನೋಡದೆ ಆಹಾರ ಸಾಮಗ್ರಿ ನೀಡಿದ್ದರು ಎನ್ನುವುದನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. ಪ್ರತಿದಿನ ನಸುಕಿನಲ್ಲಿ ವಾಕಿಂಗ್ ಮಾಡುತ್ತಿದ್ದ ಅವರು ಶುಕ್ರವಾರ ಬೆಳಗ್ಗೆಯೂ ವಾಕಿಂಗ್ ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು, ಇದುವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts