ಚಿಕ್ಕಮಗಳೂರು: ಮೆಸ್ಕಾಂ ನಿರ್ಲಕ್ಷ್ಯದಿಂದಾಗಿ ಆರು ಎಕರೆ ಕಾಫಿ ತೋಟ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಕೆ.ಆರ್.ಪೇಟೆ ಸಮೀಪದ ಬಿಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಗ್ಗನಹಳ್ಳಿ ಗ್ರಾಮದ ತೇಜಸ್ ಗೌಡ ಅವರಿಗೆ ಸೇರಿದ ಕಾಫಿ ತೋಟ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತೇಜಸ್ ಗೌಡ ಅವರಿಗೆ ಸೇರಿದ ತೋಟದ ಮಧ್ಯದಲ್ಲಿ ವಿದ್ಯುತ್ ಲೈನ್ ಹಾದು ಹೋಗಿತ್ತು. ವಿದ್ಯುತ್ ಲೈನ್ ಸ್ಥಳಾಂತರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ವಿದ್ಯುತ್ ಲೈನ್ ತೆರವು ಮಾಡಿರಲಿಲ್ಲ. ನಿನ್ನೆ ರಾತ್ರಿ ವಿದ್ಯುತ್ ಲೈನ್ನ ತಂತಿಗಳು ಒಂದಕ್ಕೊಂದು ತಾಗಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ನೋಡುನೋಡುತ್ತಿದ್ದಂತೆಯೇ ಬೆಂಕಿ ಇಡೀ ಕಾಫಿ ತೋಟವನ್ನೇ ಆವರಿಸಿ ಆಪೋಷನ ತೆಗೆದುಕೊಂಡಿದೆ.
ಬೆಂಕಿಯಿಂದಾಗಿ ತೋಟದಲ್ಲಿದ್ದ ಕಾಫಿ ಗಿಡಗಳು, ಅಡಕೆ, ಬಾಳೆ, ಕಾಳುಮೆಣಸು ಬೆಳೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬೆಂಕಿಯನ್ನು ನಂದಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾದಿದ್ದರಿಂದ ಇಡೀ ತೋಟ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಇದರಿಂದಾಗಿ ತೋಟವನ್ನು ಮತ್ತೆ ಹೊಸದಾಗಿ ಬೆಳೆಸುವ ಸ್ಥಿತಿ ತೇಜಸ್ ಗೌಡ ಅವರಿಗೆ ಬಂದೊದಗಿದೆ.