ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಸದ್ಯಕ್ಕೆ ಆರಂಭಿಸದಿರಲು ನಿರ್ಧರಿಸಲಾಗಿದೆ.
ಮೂಡುಬಿದಿರೆಯಲ್ಲಿ ಗುರುವಾರ ಕೆನರಾ ಬಸ್ ಮಾಲೀಕರ ಸಂಘ ಸಭೆ ನಡೆಯಿತು. ಕೋವಿಡ್ ಪರಿಸ್ಥಿತಿಯಲ್ಲಿ ಪ್ರಯಾಣಿಕರೇ ಕಡಿಮೆಯಾಗಿದ್ದು, ಇದರ ನಡುವೆ ಶೇ.50ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಬೇಕು ಎಂಬ ಸರ್ಕಾರದ ಮಾರ್ಗಸೂಚಿ ಇದೆ. ಡೀಸೆಲ್ ದರವೂ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಸರ್ಕಾರ ತೆರಿಗೆಯಲ್ಲೂ ವಿನಾಯಿತಿ ನೀಡುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸದ್ಯಕ್ಕೆ ಬಸ್ಗಳನ್ನು ರಸ್ತೆಗಿಳಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಸ್ ಮಾಲೀಕರು ಬಂದಿದ್ದೇವೆ ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.
ಆದರೆ, ಮಂಗಳೂರಿನಲ್ಲಿ ಸಿಟಿ ಬಸ್ಗಳು ಜುಲೈ 1ರಂದು ಸಂಚಾರ ಆರಂಭಿಸಲಿವೆ. ಸರ್ಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಗಮನಿಸಿ ಬಸ್ಗಳನ್ನು ರಸ್ತೆಗೆ ಇಳಿಸುತ್ತೇವೆ ಎಂದು ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ತಿಳಿಸಿದ್ದಾರೆ.