ಕೋಲ್ಕತ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೊನಾ ವೈರಸ್ ಅನ್ನು ಬಿಸಿಸಿಐ ಅಧ್ಯಕ್ಷರೂ ಆದ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ‘ಟೆಸ್ಟ್ ಮ್ಯಾಚ್’ಗೆ ಹೋಲಿಸಿದ್ದಾರೆ. ನಾವು ಟೆಸ್ಟ್ ಪಂದ್ಯವನ್ನು ಅಪಾಯಕಾರಿ ವಿಕೆಟ್ನಲ್ಲಿ ಆಡುತ್ತಿದ್ದೇವೆ. ಪಂದ್ಯ ಜಯಿಸುವುದು ತುಂಬಾ ಕಷ್ಟ. ಆದರೂ ನಾವು ಗೆಲ್ಲಲೇಬೇಕು. ಗೆದ್ದರಷ್ಟೇ ಬದುಕು. ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಫೇವರ್ ನೆಟ್ವರ್ಕ್ ನಡೆಸುತ್ತಿರುವ “100 ಅವರ್ಸ್ 100 ಸ್ಟಾರ್ಸ್” ಕಾರ್ಯಕ್ರಮದಲ್ಲಿ ಕೋವಿಡ್-19 ಭೀಕರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ‘ದಾದಾ’, ಧೈರ್ಯದಿಂದ ಈ ಸೋಂಕಿನ ವಿರುದ್ಧ ಹೋರಾಡಿ ಗೆಲ್ಲದೆ ಬೇರೆ ದಾರಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗೂ ಲಾಕ್ಡೌನ್ ಬಿಸಿ, ನಾಯಿಮರಿ ಚಿಕಿತ್ಸೆಗಾಗಿ ಪರದಾಟ
ಇಲ್ಲಿ ಚೆಂಡು ಸ್ವಿಂಗ್ ಆಗುತ್ತಿದೆ (ತಿರುಗುತ್ತಿದೆ). ಬ್ಯಾಟ್ಸ್ಮನ್ಗಳಿಗೆ ಮಾರ್ಜಿನ್(ಅಂಚು) ಸ್ವಲ್ಪವೇ ಇದೆ. ಆದರೂ ಬ್ಯಾಟ್ಸ್ಮನ್ ರನ್ ಬಾರಿಸಲೇಬೇಕು. ಜತೆಗೆ ವಿಕೆಟ್ ರಕ್ಷಿಸಿಕೊಳ್ಳಬೇಕು. ಆ ಮೂಲಕ ಪಂದ್ಯವನ್ನು ಗೆಲ್ಲಬೇಕು. ಇದು ಕಷ್ಟವಾದರೂ ನಾವೆಲ್ಲರೂ ಒಗ್ಗೂಡಿ ಹೋರಾಡಿದರೆ ಸೋಲು ಎಂಬುದು ಸುಳಿಯುವುದಿಲ್ಲ ಎಂದಿದ್ದಾರೆ.
ಚೀನಾದಲ್ಲಿ ಹುಟ್ಟಿದ ಮಾರಣಾಂತಿಕ ವೈರಸ್ ಜಗತ್ತಿನಾದ್ಯಂತ ದಿನೇದಿನ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು, ಜನಜೀವನದ ಮೇಲೆ ಬಾರಿ ಹೊಡೆತ ನೀಡಿದೆ. ಈಗಾಗಲೇ ಹಲವರ ಪ್ರಾಣಹಾನಿಯೂ ಆಗಿದೆ. ಮತ್ತಷ್ಟು ಜೀವಹಾನಿ ಆಗದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಕ್ರೀಡಾ ಚಟುವಟಿಕೆಗೂ ಬ್ರೇಕ್ ಹಾಕಲಾಗಿದೆ. ಕ್ರಿಕೆಟ್ ಪಂದ್ಯಗಳು, ಪ್ರವಾಸಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಹತೋಟಿಗೆ ಬಂದರೆ ಐಪಿಎಲ್ 2020 ಆರಂಭಿಸುವ ಬಗ್ಗೆ ಬಿಸಿಸಿಐ ನಂತರ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ ವಲಸೆ ಕಾರ್ಮಿಕರಿಗೆ 3 ದಿನ ಫ್ರೀ ಬಸ್
ನಮ್ಮ ಅಂಗಳ ಅಂದರೆ ದೇಶದಲ್ಲಿ ವ್ಯಾಪಿಸುತ್ತಿರುವ ಅಪಾಯಕಾರಿ ಕರೊನಾ ಸೋಂಕನ್ನು ನಾವೆಲ್ಲರೂ ಬಹಳ ಜಾಗ್ರತೆಯಿಂದ ಹೋರಾಡಿ ಮಣಿಸಬೇಕಿದೆ. ಅಸಾಧ್ಯವೆಂದು ಕೈಕಟ್ಟಿ ಕೂರುವ ಅಗತ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಸಾಧ್ಯವಾದಷ್ಟು ಬೇಗ ಮರಳಬೇಕೆಂದು ಆಶಿಸಿದ್ದಾರೆ.
ಗಂಗೂಲಿ ಸದ್ಯ ಕೋಲ್ಕತದ ತಮ್ಮ ನಿವಾಸದಲ್ಲಿ ಪತ್ನಿ ಡೋನಾ, ಮಗಳು ಸನಾ ಜತೆ ಕಾಲ ಕಳೆಯುತ್ತಿದ್ದು, ಅಲ್ಲಿಂದಲೇ ಆಡಳಿತ ಕಚೇರಿಗೆ ಸಂಬಂಧಿಸಿದ ಮತ್ತು ಇತರ ಪತ್ರ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)