ತೇರದಾಳ: ಏಳು ತಿಂಗಳಿಂದ ವೇತನ ನೀಡದ ಹಿನ್ನೆಲೆಯಲ್ಲಿ ಪುರಸಭೆ ಆರೋಗ್ಯ ವಿಭಾಗದ ಕಾರ್ಮಿಕರು ಶುಕ್ರವಾರ ತಮ್ಮ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಪ್ರಾರಂಭಿಸಿದ್ದಾರೆ.
ಎಸ್ಎಫ್ಸಿ ಯೋಜನೆಯಡಿ ಅನುದಾನದಲ್ಲಿ ವೇತನ ಪಾವತಿಸಲು ಪೌರಾಡಳಿತ ಇಲಾಖೆ ಆದೇಶ ಹೊರಡಿಸಿದೆ. ಆದರೂ ಕಳೆದ ಏಳು ತಿಂಗಳಿಂದ ಪುರಸಭೆಯವರು ಪಾವತಿಸಿಲ್ಲ. 14 ತಿಂಗಳ ಪಿಎಫ್ ಹಣ ಕೂಡ ಇಲಾಖೆಗೆ ಪಾವತಿಸಿಲ್ಲ. ಇದರಿಂದ ಅತಂತ್ರ ಸ್ಥಿತಿಯಲ್ಲಿದ್ದೇವೆ. ಪಿಎಫ್ಗೆ ಪುರಸಭೆಯವರು ತಾವು ಸಂದಾಯ ಮಾಡಬೇಕಾದ ಹಣವನ್ನು ಪಾವತಿಸದೆ ಕಾರ್ಮಿಕರ ಹಣವನ್ನೇ ಕಡಿತಗೊಳಿ ಪಾವತಿ ಮಾಡುತ್ತಿದ್ದಾರೆ ಎಂದು ಆರೋಗ್ಯ ವಿಭಾಗದ ಕಾರ್ಮಿಕರು ದೂರಿದ್ದಾರೆ.
14 ತಿಂಗಳಿಂದ ಪಿಎಫ್ ಹಣ ಪಾವತಿಸಿಲ್ಲ. ಒಂದು ವೇಳೆ ನಮಗೆ ಕೆಲಸದ ವೇಳೆ ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ?. ಪಿಫ್ ಹಣ ಪಾವತಿಸಲು ಈಗಲೇ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಾಯಿ ಕರ್ಮಚಾರಿ ಸಮಿತಿ ಕೂಡ ತಪ್ಪು ಮಾಹಿತಿ ನೀಡಿ ನಮ್ಮ ಸಹನೆ ಪರೀಕ್ಷೆ ಮಾಡಿದೆ ಎಂದು ಕಾರ್ಮಿಕ ಮುಖಂಡ ರಘು ಗೋಠಡಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ವಿಭಾಗದ ಕಾರ್ಮಿಕರ ವೇತನವನ್ನು ಪಾವತಿಸುವಂತೆ ಮುಖ್ಯಾಧಿಕಾರಿಗೆ ಹಲವು ಬಾರಿ ಸೂಚಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ಒಂದು ಬಾರಿ ಪುರಸಭೆಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಅನ್ನಪೂರ್ಣ ಸದಾಶಿವ ಹೊಸಮನಿ, ಅಧ್ಯಕ್ಷೆ ಪುರಸಭೆ
ಸರ್ಕಾರದಿಂದ ಅನುದಾನ ಬಾರದ ಕಾರಣ ವೇತನ ನೀಡಲು ವಿಳಂಬವಾಗಿದೆ. ಆದರೂ ಬೇರೆ ಬೇರೆ ವಿಭಾಗದ ಹಣ ಸೇರಿಸಿ ಮೂರು ತಿಂಗಳ ವೇತನದ ಚೆಕ್ ಬರೆಯಲಾಗಿದೆ. ಬಾಕಿ ಉಳಿದ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು.
ಈರಣ್ಣ ದಡ್ಡಿ ಮುಖ್ಯಾಧಿಕಾರಿ