ನ್ಯಾಮತಿ: ಮನುಷ್ಯನಿಗೆ ಎಷ್ಟೇ ಹಣ, ಐಶ್ವರ್ಯ, ಆಸ್ತಿ, ಅಂತಸ್ತು ಇದ್ದರೂ ನೆಮ್ಮದಿಯೇ ಇರುವುದಿಲ್ಲ. ಆಗ ಅಂಥವರ ನೆರವಿಗೆ ಬರುವುದೇ ಇಂತಹ ಧಾರ್ಮಿಕ ಕೇಂದ್ರಗಳು. ಎಲ್ಲರೂ ಭಕ್ತಿಯಿಂದ ದೇವರ ಮೊರೆ ಹೋಗುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಶುಕ್ರವಾರ, ಶ್ರೀ ನರಸಿಂಹ ಸ್ವಾಮಿ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನ, ಮಠ, ಮಂದಿರಗಳೇ ನಿಜವಾದ ನೆಮ್ಮದಿಯ ತಾಣಗಳು. ಎಷ್ಟೇ ಜಂಜಾಟವಿದ್ದರೂ ಒಂದಷ್ಟು ಸಮಯ ದೇವಸ್ಥಾನದಲ್ಲಿ ಕುಳಿತು ಬಂದರೆ ನೆಮ್ಮದಿ ಕಂಡುಕೊಳ್ಳಬಹುದು ಎಂದರು.
ಭಕ್ತರು ದೇವಸ್ಥಾನದ ಹುಂಡಿಗೆ ಸಮರ್ಪಿಸಿದ ಕಾಣಿಕೆಯಿಂದ ಬಂದ ಆದಾಯದಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಲಾಗಿದೆ. ಗ್ರಾಮಸ್ಥರು ಸಮುದಾಯ ಭವನದ ಸಮಸ್ಯೆ ಕುರಿತು ಮನವಿ ಮಾಡಿದ್ದು, ಸಿಎಂ ವಿಶೇಷ ಅನುದಾನ ತಂದು ಸಮುದಾಯ ಭವನ ಪೂರ್ಣಗೊಳಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಶಿವಮೊಗ್ಗದ ವಿಪ ಸದಸ್ಯ ಡಿ.ಎಸ್.ಅರುಣ್ಕುಮಾರ್ ಮಾತನಾಡಿ, ಭಾರತೀಯ ಕಲೆ, ಸಂಸ್ಕೃತಿ, ಸಂಸ್ಕಾರಕ್ಕಾಗಿ ವಿಶ್ವದ ಅನೇಕ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದರು.
ಮಾಜಿ ಶಾಸಕ ಡಿ.ಬಿ.ಗಂಗಪ್ಪ ಮಾತನಾಡಿ, ಈ ಗ್ರಾಮಕ್ಕೆ ತಮ್ಮ ಅಧಿಕಾರವಧಿಯಲ್ಲಿ ಯಾರೋ ಉಳುಮೆ ಮಾಡುತ್ತಿದ್ದ ಜಮೀನನ್ನು ಬಿಡಿಸಿ ಶಾಲೆ ನಿರ್ಮಿಸಿ ಕೊಟ್ಟಿದ್ದೇನೆ. ಜತೆಗೆ, ಆಗಿನ ಸಚಿವ ಎಂ.ವಿ.ರಾಜಶೇಖರ್ ಮೂರ್ತಿ ಅವರನ್ನು ಕರೆತಂದು ಕಲ್ಯಾಣ ಮಂಟಪಕ್ಕೆ ಶಂಕುಸ್ಥಾಪನೆ ಮಾಡಿಸಿದ್ದೇನೆ ಎಂದರು.
ಮುಖಂಡ ಬಿ.ಸಿದ್ದಪ್ಪ ಮಾತನಾಡಿ, ಗ್ರಾಮದಲ್ಲಿ ಈಗಿರುವ ಕಲ್ಯಾಣ ಮಂಟಪದ ಮೇಲ್ಭಾಗದ ಕಾಮಗಾರಿ ಅಪೂರ್ಣಗೊಂಡಿದ್ದು, ಅದಕ್ಕೆ ಶಾಸಕ ರೇಣುಕಾಚಾರ್ಯ ಅವರು ವಿಶೇಷ ಅನುದಾನ ತಂದು ಪೂರ್ಣಗೊಳಿಸಿಕೊಡಬೇಕು ಎಂದರು.
ಮುಖಂಡ ಎಚ್.ಎ.ಉಮಾಪತಿ ಮಾತನಾಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಕೆ.ನರಸಿಂಹಮೂರ್ತಿ, ಪ್ರಧಾನ ಅರ್ಚಕ ರಾಜುಸ್ವಾಮಿ, ಮಾಜಿ ಚೇರ್ಮನ್ ಎಸ್.ಎಚ್.ನರಸಪ್ಪ, ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ್ ಇಂಚರ, ಅರಬಗಟ್ಟೆ ಗ್ರಾಪಂ ಅಧ್ಯಕ್ಷೆ ಅನಿತಾ ಕರಿಬಸಪ್ಪ, ಉಪಾಧ್ಯಕ್ಷೆ ಚಂದ್ರಮ್ಮ ಹಳದಪ್ಪ ಮತ್ತಿತರರಿದ್ದರು.