ಹೈದರಾಬಾದ್: ಪ್ರಖ್ಯಾತ ಟಿವಿ ಧಾರಾವಾಹಿ ಮತ್ತು ಸಿನಿಮಾ ನಟಿ ಶ್ರಾವಣಿ ಕೊಂಡಪಲ್ಲಿ (26) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಹೈದಾರಬಾದಿನಲ್ಲಿ ನಡೆದಿದೆ.
ಎಸ್ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಮಧುರನಗರ ಏರಿಯಾದಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಶ್ರಾವಣಿ ಶವ ಪತ್ತೆಯಾಗಿದೆ. ಅವರ ಮೃತದೇಹವನ್ನು ಶವಪರೀಕ್ಷೆಗಾಗಿ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಾನಸು ಮಮತಾ ಮತ್ತು ಮೌನರಾಗಂ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ಶ್ರಾವಣಿ ನಟಿಸಿದ್ದರು.
ವ್ಯಕ್ತಿಯೊಬ್ಬನ ಕಿರುಕುಳದಿಂದ ಬೇಸತ್ತು ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆರೋಪಿಯನ್ನು ದೇವರಾಜ್ ರೆಡ್ಡಿ ಎಂದು ಗುರುತಿಸಲಾಗಿದೆ. ಕಾಕಿನಾಡದ ಗೊಲ್ಲಪ್ರೊಲು ನಿವಾಸಿಯಾಗಿರುವ ಈತ ಟಿಕ್ಟಾಕ್ ಆ್ಯಪ್ನಲ್ಲಿ ಕೆಲ ವರ್ಷಗಳ ಹಿಂದೆ ಶ್ರಾವಣಿಗೆ ಪರಿಚಯವಾಗಿದ್ದ. ತನ್ನನ್ನು ತಾನು ಅನಾಥನೆಂದು ಪರಿಚಯ ಮಾಡಿಕೊಂಡಿದ್ದ ದೇವರಾಜ್ ದಿನ ಕಳೆದಂತೆ ಶ್ರಾವಣಿಗೆ ಹತ್ತಿರವಾಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್ಗೆ ಡೇಟ್ ಫಿಕ್ಸ್
ಮಾಧ್ಯಮಗಳೊಂದಿಗೆ ಮಾತನಾಡಿರುವ ಶ್ರಾವಣಿ ಸಹೋದರ ಶಿವ ಕೊಡಪಲ್ಲಿ, ದೇವರಾಜ್ ಹಣಕ್ಕಾಗಿ ನನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ಕೆಲವೊಂದು ವಿಡಿಯೋಗಳನ್ನು ಇಟ್ಟುಕೊಂಡು ಶ್ರಾವಣಿಗೆ ಬೆದರಿಕೆ ಹಾಕುತ್ತಿದ್ದ. ಒತ್ತಡದಲ್ಲಿರುವುದಾಗಿ ಮತ್ತು ಬ್ಲ್ಯಾಕ್ಮೇಲ್ ಕುರಿತು ನನ್ನೊಂದಿಗೆ ಹೇಳಿಕೊಂಡಿದ್ದಳು. ಈ ಮೊದಲು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳಂತೆ. ಆದರ, ಇದೀಗ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆಂದು ಹೇಳಿದ್ದಾರೆ.
ಇದೀಗ ಶ್ರಾವಣಿ ಪಾಲಕರು ದೇವರಾಜ್ ವಿರುದ್ಧ ಎಸ್ಆರ್ ನಗರದಲ್ಲಿ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಇನ್ಸ್ಪೆಕ್ಟರ್, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಕೆಲ ಚಿತ್ರಗಳಲ್ಲೂ ನಟಿಸಿರುವ ಶ್ರಾವಣಿ ಕಳೆದ 8 ವರ್ಷಗಳಿಂದ ಇಂಡಸ್ಟ್ರಿಯ ಭಾಗವಾಗಿದ್ದರು. (ಏಜೆನ್ಸೀಸ್)
ಚೀನಾದಿಂದ ಬಂದ ಯಾಕ್ ಪ್ರಾಣಿಗಳ ಹಿಂಡಿನ ಮೇಲೆ ಅನುಮಾನ? ಇದಕ್ಕೆ ಕಾರಣವೂ ಇದೆ!