ಗಂಗಾವತಿ: ಅದಾಲತ್ ಕಾರ್ಯಕ್ರಮಗಳ ಮೂಲಕ ಕಂದಾಯ ಇಲಾಖೆ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ಹೇಳಿದರು.
ತಾಲೂಕಿನ ಮರಳಿಯ ಆಂಜನೇಯ ದೇವಾಲಯದ ಸಮುದಾಯ ಭವನದಲ್ಲಿ ಕಂದಾಯ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಪಿಂಚಣಿ ಅದಾಲತ್ನಲ್ಲಿ ಲಾಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಸಾಮಾಜಿಕ ಭದ್ರತೆ ಯೋಜನೆಯಡಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಲಾಗುತ್ತಿದ್ದು, ಪ್ರತಿಯೊಂದು ಹೋಬಳಿ ವ್ಯಾಪ್ತಿಯಲ್ಲಿ ಅದಾಲತ್ ಆಯೋಜಿಸಲಾಗುವುದು. ಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಅದಾಲತ್ನಲ್ಲಿ ಗೃಹಲಕ್ಷ್ಮೀ ಯೋಜನೆ, ಬೆಳೆ ಪರಿಹಾರ, ಸ್ಮಶಾನ ಅಭಿವೃದ್ಧಿ, ಭೂಮಿ ನಕ್ಷೆ, ಕಸ ವಿಲೇವಾರಿ ವ್ಯವಸ್ಥೆ ಮತ್ತು ನೀರಿನ ಟ್ಯಾಂಕ್ ಸ್ಥಳಾವಕಾಶದ ಕುರಿತು ಚರ್ಚಿಸಲಾಯಿತು. ಭೂಮಿ ಗುರುತಿಸುವ ಹಾಗೂ ನೀರಿನ ಟ್ಯಾಂಕ್ಗೆ ಸ್ಥಳಾವಕಾಶದ ಬಗ್ಗೆ ಮಾಹಿತಿ ನೀಡಲಾಯಿತು. ವಿವಿಧ ಯೋಜನೆ ಲಾನುಭವಿಗಳಿಗೆ ಮಾಸಿಕ ಮಾಶಾಸನ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಗ್ರಾಪಂ ಸದಸ್ಯೆ ಶ್ರೀದೇವಿ ಜಂಬಣ್ಣ, ತಹಸೀಲ್ದಾರ್ ಮಹೆಬೂಬ್ಅಲಿ, ಕಂದಾಯ ನಿರೀಕ್ಷಕ ಹಾಲೇಶ, ವಿಎ ನಾಗಬಿಂದು, ವಿಎಸ್ಸೆಸ್ಸೆನ್ ಮಾಜಿ ಸದಸ್ಯ ರಮೇಶ ಕುಲ್ಕರ್ಣಿ, ಮುಖಂಡರಾದ ಜಂಬಣ್ಣ ತಾಳೂರು, ಮೌಲಸಾಬ್, ಯಮನೂರಪ್ಪ ಛಲವಾದಿ ಇತರರಿದ್ದರು.