ಲಖನೌ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮೊಬೈಲ್ ಫೋನ್ ಗೀಳಿಗೆ ಹೆಚ್ಚಾಗಿ ಮಾರುಹೋಗುತ್ತಿದ್ದು, ಇದೊಂದು ವ್ಯಸನವಾಗಿ ಮಾರ್ಪಟ್ಟಿದೆ. ಇದೀಗ ಇದೇ ವಿಚಾರವಾಗಿ ಅಣ್ಣನೊಬ್ಬ ತನ್ನ ತಂಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಸಹರಾನ್ಪುರದ ಶೇಖಪುರ ಕದೀಂ ಗ್ರಾಮದಲ್ಲಿ ನಡೆದಿದೆ.
ಆರೋಪಿ ಆದಿತ್ಯ(20) ತನ್ನ ಸಹೋದರಿ ಮುಸ್ಕಾನ್ (17)ಗೆ ಮೊಬೈಲ್ ಫೋನ್ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯದಂತೆ ಸೂಚನೆ ನೀಡಿದ್ದ. ಆದರೂ ಸಹ ಆಕೆ ಹೆಚ್ಚಾಗಿ ಮೊಬೈಲ್ ಫೋನ್ ಬಳಸಿದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಎಸ್ಪಿ ಅಭಿಮನ್ಯು ಮಾಂಗ್ಲಿಕ್, ತನ್ನ ಸಹೋದರಿ ಮುಸ್ಕಾನ್ ಹೆಚ್ಚು ಹೊತ್ತು ಮೊಬೈಲ್ ಫೋನ್ ಬಳಸುತ್ತಾ ಚಾಟಿಂಗ್ ಮಾಡುತ್ತಿದ್ದರಿಂದ ಕುಪಿತಗೊಂಡಿದ್ದ ಆರೋಪಿ ಆದಿತ್ಯ ಆಕೆಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದ. ಎಷ್ಟು ಬಾರಿ ಆಕೆ ಈತನ ಮಾತು ಕೇಳದೆ ಮೊಬೈಲ್ ಬಳಸುತ್ತಿದ್ದಳು ಎಂದು ಹೇಳಲಾಗಿದೆ.
ಇದನ್ನೂ ಓದಿ: 370ನೇ ವಿಧಿ ರದ್ದತಿ; ಪ್ರಧಾನಿ ಮೋದಿ ಕಾಶ್ಮೀರಿ ಪಂಡಿತರಿಗೆ ಮತದಾನ ಮಾಡುವ ಗ್ಯಾರಂಟಿ ಕೊಡುವರೇ: ಉದ್ಧವ್ ಠಾಕ್ರೆ
ಭಾನುವಾರ ಸಂಜೆ ಇದೇ ವಿಚಾರವಾಗಿ ಸಹೋದರ ಹಾಗೂ ಸಹೋದರಿ ನಡುವೆ ಗಲಾಟೆಯಾಗಿದ್ದು, ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಆರೋಪಿ ಕಂಟ್ರಿ ಪಿಸ್ತೂಲ್ನಿಂದ ತನ್ನ ಸಹೋದರಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಗುಂಡಿನ ಸದ್ದು ಕೇಳಿದ ಕೂಡಲೇ ನೆರೆಹೊರೆಯವರು ಸಂತ್ರಸ್ತೆಯ ನೆರವಿಗೆ ಧಾವಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವ ಆಗಿದ್ದರಿಂದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಸ್ಥಳೀಯರು ಹೇಳುವ ಪ್ರಕಾರ ಸಂತ್ರಸ್ತೆ ಮುಸ್ಕಾನ್ ಬೇರೊಂದು ಧರ್ಮದ ಯುವಕನೊಂದಿಗೆ ಚಾಟ್ ಮಾಡುತ್ತಿದ್ದಳು ಎಂಬ ವಿಚಾರ ತಿಳಿದು ಆದಿತ್ಯ ವಿರೋಧಿಸಿದ್ದ ಎಂದು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಎಎಸ್ಪಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.