ಬೆಂಗಳೂರು: ಕರೊನಾ ಎರಡನೇ ಅಲೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದನ್ನು ಕಂಡ ಜನರು ರೋಗದ ಭಯ, ಸಾವಿನ ಭೀತಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವೆಗೆ ಮುಂದಾಗಿರುವ ಸಿರಿಗೆರೆ ತರಳಬಾಳು ಬೃಹನ್ಮಠ ಕೋವಿಡ್ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬುವುದರ ಜತೆಗೆ ವಿವಿಧ ಸೇವೆಗಳಲ್ಲಿ ತೊಡಗಿಕೊಂಡಿದೆ.
ಕರೊನಾದಿಂದ ಕಂಗೆಟ್ಟಿರುವ ಜನತೆಗೆ ಆಸರೆಯಾಗುವ ಮಾನವೀಯತೆಯ ನಿಟ್ಟಿನಲ್ಲಿ ತರಳಬಾಳು ಮಠ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಷ್ಟೇ ಅಲ್ಲದೇ ಅಂಗಸಂಸ್ಥೆಯಾದ ತರಳಬಾಳು ಕೇಂದ್ರದ ಮೂಲಕ ಬೆಂಗಳೂರು ನಗರದ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಕರೊನಾ ವಾರಿಯರ್ಸ್ ಗಳು, ಪರಿಚಾರಕರು ಹಾಗೂ ಕೋವಿಡ್ ಸೋಂಕಿತರ ಸಂಬಂಧಿಗಳಿಗೆ ಅವಶ್ಯಕವಾಗಿರುವ ಆಹಾರದ ಪೂರೈಕೆಯನ್ನು ಉಚಿತವಾಗಿ ಸಮರ್ಪಣೆ ಮಾಡಲಾಗುತ್ತಿದೆ.
ವಿಕ್ಟೋರಿಯ ಆಸ್ಪತ್ರೆಯಲ್ಲಿ ದಿನನಿತ್ಯ ಸುಮಾರು 500 ರಿಂದ 600 ಜನರಿಗೆ ತರಳಬಾಳು ಕೇಂದ್ರದ ಸಿಬ್ಬಂದಿ ಆಹಾರ ವಿತರಿಸುತ್ತಿದ್ದಾರೆ. ಪೊಂಗಲ್, ಮೊಸರನ್ನ, ಪಲಾವ್, ಪುಳಿಯೊಗರೆ-ಮೊಸರನ್ನ ಎಂಬಂತೆ ದಿನಕ್ಕೊಂದು ರೀತಿಯ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಜತೆಗೆ ಚಮಚ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ಸಹ ನೀಡಲಾಗುತ್ತಿದೆ ಎಂದು ಬೆಂಗಳೂರು ತರಳಬಾಳು ಕೇಂದ್ರದ ಕಾರ್ಯದರ್ಶಿ ಭಾತಿ ವಿಶ್ವನಾಥ್ ತಿಳಿಸಿದರು.
ಆಹಾರ ವಿತರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ. ತರಳಬಾಳು ಮಠದ ಮೇಲಿನ ವಿಶ್ವಾಸದಿಂದ ವೈದ್ಯರು, ಹಾಗೂ ಸಿಬ್ಬಂದಿ ಸಹ ನಮ್ಮಿಂದ ಆಹಾರ ಪಡೆಯುತ್ತಾರೆ. ರೋಗಿಗಳ ಕಡೆಯವರು ಆಸ್ಪತ್ರೆಗೆ ಬಂದಿರುತ್ತಾರೆ. ಅವರಿಗೆ ಹೊರಗಡೆ ಎಲ್ಲೂ ಹೋಟೆಲ್ಗಳು ಸಿಗುವುದಿಲ್ಲ. ಹಾಗಾಗಿ ಅಂತಹವರಿಗೂ ಆಹಾರ ನೀಡುತ್ತಿದ್ದೇವೆ. ಜೂನ್ 7 ರ ವರೆಗೆ ಕರ್ಫ್ಯೂ ಇದ್ದು ನಾವು ಜೂನ್ 9 ರವರೆಗೆ ವಿಕ್ಟೋರಿಯ ಆಸ್ಪತ್ರೆಯಲ್ಲಿ ಆಹಾರ ವಿತರಣೆ ಮಾಡುತ್ತೇವೆ. ಕರ್ಫ್ಯೂ ಮುಂದುವರೆದರೆ ಮುಂದುವರೆಸುತ್ತೇವೆ. ಬೇರೆ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸುವ ಚಿಂತನೆ ಇದೆ ಎಂದು ವಿಶ್ವನಾಥ್ ತಿಳಿಸಿದರು.
ಕಳೆದ ತಿಂಗಳು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ವಿಕ್ಟೋರಿಯಾ ಆಸ್ಪತ್ರೆಗೆ ಬಂದಾಗ ಇಲ್ಲಿನ ಜನರ ನೋವನ್ನು ಅರಿತು ಇಲ್ಲಿನ ಸಿಬ್ಬಂದಿ ಹಾಗೂ ರೋಗಿಗಳ ಕಡೆಯವರಿಗೆ ಆಹಾರ ಪೂರೈಸಲು ನಿರ್ಧರಿಸಿದರಂತೆ.
ಈ ಬಗ್ಗೆ ಬರೀ ತರಳಬಾಳು ಶ್ರೀಗಳು, “ಪೂಜೆ, ಪುನಸ್ಕಾರ, ಭಾಷಣ, ಜಾತ್ರೆ, ಸಮಾರಂಭಗಳನ್ನು ಬಿಟ್ಟು ದೇವರು ಕೊಟ್ಟಿರುವ ಬುದ್ಧಿ ಶಕ್ತಿಯಿಂದ ಇಂತಹ ಭೀಕರ ಪರಿಸ್ಥಿತಿಯ ಎದುರಿಸಬೇಕಾಗಿದೆ. ಮಹಾಯುದ್ಧಗಳಲ್ಲಿ ಯುವಶಕ್ತಿಯನ್ನು ಕಳೆದುಕೊಳ್ಳುವಂತೆ ಹೆಚ್ಚಾಗಿ ಯುವಕರೇ ಸೋಂಕಿಗೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜನರಿಗೆ ಹೋಂ ಐಸೋಲೇಷನ್ ಆಗಲು ವ್ಯವಸ್ಥೆ ಇರುವುದಿಲ್ಲ,ಅಂತಹವರನ್ನು ಮನೆಗಳಲ್ಲಿ ಬಿಡದೆ ಕೇರ್ ಸೆಂಟರ್ ಗಳಿಗೆ ಸೇರಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಸೋಂಕು ಹೆಚ್ಚಳವಾಗುತ್ತದೆ, ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ ಅಂತರದಲ್ಲಿ ಕ್ವಾರಂಟೈನ್ ಆಗುವಂತಹ ಜಾಗೃತಿ ಮೂಡಿಸು ಕೆಲಸವನ್ನು ನಮ್ಮ ಮಠದ ಮೂಲಕ ನಿರಂತರವಾಗಿ ಮಾಡುತ್ತಿದ್ದೇವೆ ಎಂದು ಶಿವಮೂರ್ತಿ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಸಂಸ್ಕೃತ ಶ್ಲೋಕವೊಂದರಂತೆ ದೇವರು ದನ ಕಾಯುವ ಹುಡುಗನಂತೆ ಯಾರನ್ನೂ ರಕ್ಷಣೆ ಮಾಡುವುದಿಲ್ಲ,ತಾನು ರಕ್ಷಣೆ ಮಾಡಬೇಕೆಂದವರಿಗೆ ಬುದ್ಧಿ ಧಾರೆ ಎರೆದಿರುತ್ತಾನೆ. ಆ ಬುದ್ಧಿ ಶಕ್ತಿ ಬಳಸಿಕೊಂಡು ಬದುಕಬೇಕು. ಸೋಂಕಿನಿಂದ ಬಳಲುವವರ ತೊಳಲಾಟ, ಆತಂಕ, ಭಯ, ಅನಿಶ್ಚಿತತೆ ಎಲ್ಲವೂ ಮನಸ್ಸಿನ ಮೇಲೆ ತೀವ್ರ ಘಾಸಿಗೊಳಿಸಿದೆ. ಸಂಕಷ್ಟದಲ್ಲಿರುವವರ ನೆರವಿಗೆ ಹೋಗದಿದ್ದ ಮೇಲೆ ಅದೂ ಒಂದು ಜೀವನ ಎಂದು ಅರಿತು ಕೋವಿಡ್ ಸೋಂಕಿತರ ನೆರವಿಗೆ ಕಂಕಣ ಕಟ್ಟಿ ನಿಂತಿದ್ದೇವೆ ಎಂದು ಶ್ರೀಗಳು ವಿವರಿಸಿದ್ದಾರೆ.
ದಾವಣಗೆರೆಯಲ್ಲಿ ತರಳಬಾಳು ಕೋವಿಡ್ ಕೇರ್ ಸೆಂಟರ್, ಉಚಿತ ಆಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆ, ಸೋಂಕಿತರಿಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆ ಕಲ್ಪಿಸುವಲ್ಲಿ ತರಳಬಾಳು ಬೃಹನ್ಮಠ ಕೆಲಸ ಮಾಡುತ್ತಿದೆ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಶಿವಮೂರ್ತಿ ಶಿವಾಚಾರ್ಯ ಶ್ರೀಗಳೇ ಖುದ್ದಾಗಿ ಮಾಡುತ್ತಿದ್ದಾರೆ. ದಿನದ 24 ಗಂಟೆ ತರಳಬಾಳು ಮಠ ಸೇವೆಯಲ್ಲಿ ತೊಡಗಿದೆ.
ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ
ನಿಂತಿದ್ದ ಆ್ಯಂಬುಲೆನ್ಸ್ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!
ನರ್ಸ್ ಕೆನ್ನೆಗೆ ಹೊಡೆದ ವೈರಲ್ ವಿಡಿಯೋದಲ್ಲಿದ್ದ ಡಾಕ್ಟರ್ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?