ರಾಣೆಬೆನ್ನೂರ: ಶೈಕ್ಷಣಿಕ ಚಟುವಟಿಕೆಗಳ ನಡುವೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಪ್ರಾಚಾರ್ಯ ಡಾ. ಬಿ. ಶಿವಕುಮಾರ ಹೇಳಿದರು.
ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನ (ಎಥ್ನಿಕ್ ಡೇ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಹಳೆಯದ್ದನ್ನು ಮರೆಯದೆ ಎಲ್ಲರೂ ಒಟ್ಟಾಗಿ ನಮ್ಮ ಸಂಸ್ಕೃತಿಯ ಉಡುಗೆ-ತೊಡುಗೆ ಪ್ರದರ್ಶಿಸಬೇಕು. ವಿವಿಧತೆಯಲ್ಲಿ ಏಕತೆ ಎಂಬ ಮಹತ್ವ ಸಾರಬೇಕು ಎಂದರು.
ಕಾಲೇಜ್ನ ಹುಡುಗರು ಜುಬ್ಬಾ, ಪಂಚೆ ಶರ್ಟ್, ಪೈಜಾಮ, ಕುರ್ತಾ ಹಾಗೂ ಹುಡುಗಿಯರು ಮೊಳಕಾಲ್ಮುರು ಸೀರೆ, ಬನಾರಸ್, ಕಾಂಚಿಪುರಂ, ಇಳಕಲ್ಲ ಸೀರೆ ಉಟ್ಟುಕೊಂಡು ಸಾಂಪ್ರದಾಯಿಕ ದಿನ ಆಚರಿಸಿದರು.
ಕಾರ್ಯಕ್ರಮ ಸಂಯೋಜಕ ಡಾ. ಬಿ. ಮಹೇಶ್ವರಪ್ಪ, ಶಿವಕುಮಾರ ಹೊನ್ನಾಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.