More

    ತ್ರಿಷಾ ಜತೆ ಬೆಡ್​ರೂಮ್​ ಸೀನ್​: ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದ ಮನ್ಸೂರ್​ ಅಲಿ ಖಾನ್​

    ಚೆನ್ನೈ: ತಮಿಳು ನಟ ಮನ್ಸೂರ್​ ಅಲಿ ಖಾನ್​ಗೆ ಮುಖ ಪರಿಚಯ ಹೊಸದೇನಲ್ಲ. ಬ್ಲಾಕ್​ಬಸ್ಟರ್​ ಸಿನಿಮಾ ದಿಗ್ಗಜರು ನೋಡಿದವರಿಗೆ ಮನ್ಸೂರ್​ ಯಾರೆಂಬುದು ಗೊತ್ತಾಗುತ್ತದೆ. ಸದ್ಯ ಕಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಮನ್ಸೂರ್​ ಅಲಿ ಖಾನ್​, ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಇದೀಗ ಬಹುಭಾಷ ನಟಿ ತ್ರಿಷಾ ಕುರಿತು ನಾಲಿಗೆ ಹರಿಬಿಡುವ ಮೂಲಕ ವಿವಾದದ ಸುಳಿಯಲ್ಲಿ ಸಿಲುಕಿರುವುದಲ್ಲದೆ, ತಮ್ಮ ಅಶ್ಲೀಲ ಹೇಳಿಕೆಯನ್ನು ಮನ್ಸೂರ್​ ಸಮರ್ಥಿಸಿಕೊಂಡಿದ್ದಾರೆ.

    ಏನಿದು ವಿವಾದ?
    ಇತ್ತೀಚೆಗಷ್ಟೇ ಬಿಡುಗಡೆಯಾದ ಸ್ಟಾರ್​ ನಿರ್ದೇಶಕ ಲೋಕೇಶ್​ ಕನಗರಾಜು ನಿರ್ದೇಶನದ ಹಾಗೂ ಇಳಯದಳಪತಿ ವಿಜಯ್​ ನಟನೆಯ ಲಿಯೋ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದೆ. ಈ ಸಿನಿಮಾದಲ್ಲಿ ತ್ರಿಷಾ ಸಹ ನಟಿಸಿದ್ದಾರೆ. ಮನ್ಸೂರ್​ ಅಲಿ ಖಾನ್​ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಬಗ್ಗೆ ಮಾತನಾಡುವಾಗ ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ನಾಯಕಿಯರಾದ ಖುಷ್ಬೂ, ರೋಜಾ ಸೇರಿದಂತೆ ಹಲವರೊಂದಿಗೆ ರೇಪ್ ಸೀಕ್ವೆನ್ಸ್ ಮಾಡಿದ್ದೇನೆ. ಆದರೆ ನನಗೆ ಲಿಯೋ ಪಾತ್ರದ ಆಫರ್ ಬಂದಾಗ, ನಾನು ತ್ರಿಷಾ ಜೊತೆ ರೇಪ್ ಸೀಕ್ವೆನ್ಸ್ ಮಾಡುತ್ತೇನೆ ಎಂದು ಭಾವಿಸಿದೆ. ದುರದೃಷ್ಟವಶಾತ್ ಸಿನಿಮಾದಲ್ಲಿ ಅಂತಹ ಸೀಕ್ವೆನ್ಸ್ ಇಲ್ಲ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಮನ್ಸೂರ್​ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ತ್ರಿಷಾ ಖಂಡನೆ
    ಮನ್ಸೂರ್​ ಅವರ ಆಕ್ಷೇಪಾರ್ಹ ಹೇಳಿಕೆಗಳು ನಟಿ ತ್ರಿಷಾ ಅವರ ಗಮನಕ್ಕೂ ಬಂದಿದ್ದು, ಬೇಸರದ ಜತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ತ್ರಿಷಾ, ಇತ್ತೀಚಿನ ವಿಡಿಯೋದಲ್ಲಿ ನನ್ನ ಬಗ್ಗೆ ಮನ್ಸೂರ್​ ಅಲಿ ಖಾನ್​ ಅವರು ಕೆಟ್ಟ ಮತ್ತು ಅಸಹ್ಯಕರ ರೀತಿಯಲ್ಲಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಆಡಿರುವ ಮಾತುಗಳು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ ಮತ್ತು ಅವರ ಕೆಟ್ಟ ಅಭಿರುಚಿಯನ್ನು ತೋರುತ್ತದೆ. ಇನ್ನೆಂದಿಗೂ ಅವರೊಂದಿಗೆ ನಾನು ತೆರೆ ಹಂಚಿಕೊಳ್ಳುವುದಿಲ್ಲ. ಇವರಂತಹ ಜನರು ಮಾನವ ಕುಲಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ತ್ರಿಷಾ ಟೀಕಾ ಪ್ರಹಾರ ನಡೆಸಿದ್ದಾರೆ.

    ಲೋಕೇಶ್​ ರಿಯಾಕ್ಷನ್
    ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಹೀಗಿರುವಾಗ ಮನ್ಸೂರ್, ಮಹಿಳೆಯರ ಬಗ್ಗೆ ಮಾಡಿರುವ ಅಶ್ಲೀಲ, ದ್ವೇಷಪೂರಿತ ಕಾಮೆಂಟ್‌ಗಳನ್ನು ನೋಡಿ ತುಂಬಾ ಬೇಸರದ ಜತೆಗೆ ತುಂಬಾ ಕೋಪವಿದೆ. ಇಂತಹ ವರ್ತನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಾವು ಮಹಿಳೆಯರು ಮತ್ತು ಸಹ ಕಲಾವಿದರನ್ನು ಗೌರವದಿಂದ ಕಾಣಬೇಕು. ಯಾವುದೇ ಇಂಡಸ್ಟ್ರಿಯಲ್ಲಿ ಎಲ್ಲರನ್ನೂ ಗೌರವದಿಂದ ಕಾಣಬೇಕು ಎಂದಿದ್ದಾರೆ.

    ಮನ್ಸೂರ್​ಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ
    ಅಶ್ಲೀಲ ಕಾಮೆಂಟ್​ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವ ಮನ್ಸೂರ್​ ಅಲಿ ಖಾನ್​ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ತ್ರಿಷಾ ಬಗ್ಗೆ ನಾನು ನೀಡಿದ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ನನ್ನ ಪುತ್ರ ಮತ್ತು ಪುತ್ರಿ ನನಗೆ ಕಳುಹಿಸಿದರು. ನನ್ನ ಮುಂದಿನ ಸಿನಿಮಾ ಬಿಡುಗಡೆ ಮತ್ತು ಮುಂಬರುವ ಚುನಾವಣೆಯಲ್ಲಿ ಪಕ್ಷವೊಂದಕ್ಕೆ ಬೆಂಬಲಿಸುವ ಸಮಯದಲ್ಲೇ ಈ ವಿವಾದ ಭುಗಿಲೆದ್ದಿದೆ. ವಿಡಿಯೋದಲ್ಲಿ ನಾನು ತ್ರಿಷಾ ಬಗ್ಗೆ ಮೆಚ್ಚುಗೆಯ ಮಾತಿಗಳನ್ನಾಡಿದ್ದೆ. ಹಳೇ ಕಾಲದ ಹಾಗೆ ಈಗಿನ ಕಾಲದಲ್ಲಿಯೂ ನಾಯಕಿಯರ ಜೊತೆ ನಟಿಸುವ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ನಾನು ನನ್ನ ಹತಾಶೆಯನ್ನು ಹೊರಹಾಕಿದ್ದೆ. ನಾನು ಮಾಡಿದ್ದ ಕಾಮೆಂಟ್‌ಗಳನ್ನು ತುಂಬಾ ಹಗುರವಾದ ಧಾಟಿಯಲ್ಲಿ ಹೇಳಿದ್ದೆ. ವಿವಾದ ಸೃಷ್ಟಿಸಲೆಂದೇ ವಿಡಿಯೋವನ್ನು ಎಡಿಟ್​ ಮಾಡಿ ಹರಿಬಿಟ್ಟಿದ್ದಾರೆ. ಇದಕೆಲ್ಲ ಎದುರುವ ವ್ಯಕ್ತ ನಾನಲ್ಲ. ತ್ರಿಷಾಗೆ ಎಡಿಟ್​ ಮಾಡಿರುವ ವಿಡಿಯೋವನ್ನು ತೋರಿಸಿದ್ದಾರೆ. ನನ್ನ ಜೊತೆ ನಟಿಸಿದ ನಾಯಕಿಯರು ಈಗ ಎಂಎಲ್ ಎ, ಎಂಪಿ ಆಗಿದ್ದಾರೆ. ಅಲ್ಲದೆ, ಯಶಸ್ವಿ ಉದ್ಯಮಿಗಳನ್ನು ಮದುವೆಯಾಗಿದ್ದಾರೆ. ನನ್ನ ಮಗಳು ದಿಲ್ರುಬಾ, ನಿಮ್ಮ ಅಭಿಮಾನಿ ಎಂದು ನಾನು ತ್ರಿಷಾಗೆ ಲಿಯೋನ ಪೂಜಾ ಸಮಾರಂಭದಲ್ಲಿ ಹೇಳಿದ್ದೆ. ನಾನು ಸುಮಾರು 360ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದೇನೆ. ನಾನು ಸದಾ ನನ್ನ ಸಹ ಕಲಾವಿದರಿಗೆ ಗೌರವ ಕೊಡುತ್ತೇನೆ. ನನ್ನನ್ನು ವಿರೋಧ ಮಾಡುವವರು ಮಾಡಿರುವ ಕೃತ್ಯ ಇದು. ತ್ರಿಷಾಗೆ ಕೋಪ ತರಿಸಲು ಎಡಿಟ್​ ಮಾಡಿದ ವಿಡಿಯೋ ತೋರಿಸಿದ್ದಾರೆ. ಈ ಜಗತ್ತಿನಲ್ಲಿ ಎಷ್ಟೋ ಸಮಸ್ಯೆಗಳಿವೆ. ಸದ್ಯಕ್ಕೆ ನಾವು ನಮ್ಮ ಕೆಲಸಕ್ಕೆ ಮರಳೋಣ ಎಂದು ಮನ್ಸೂರ್​ ಹೇಳಿದ್ದಾರೆ.

    ಖುಷ್ಬೂ ಸುಂದರ್​ ಕಿಡಿ
    ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್​ ಸಹ ಮನ್ಸೂರ್​ ಹೇಳಿಕೆಯನ್ನು ಖಂಡಿಸಿದ್ದಾರೆ. ಮನ್ಸೂರ್​ ಹೇಳಿಕೆಯನ್ನು ಗಮನಿಸಿದ್ದು, ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ. ಇಂತಹ ಕೊಳಕು ಮನಸ್ಸಿನಿಂದ ಯಾರೂ ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತ್ರಿಷಾ ಸೇತಿದಂತೆ ಇತರೆ ಸಹಕಲಾವಿದೆಯರ ಜತೆ ನಾನು ನಿಲ್ಲುತ್ತೇನೆ. ನನ್ನನ್ನು ಸೇರಿಸಿ ಹಲವರ ಬಗ್ಗೆ ಈ ಮನುಷ್ಯ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ನಾವು ಮಹಿಳೆಯರನ್ನು ರಕ್ಷಿಸಲು ಮತ್ತು ಅವರಿಗೆ ಘನತೆ ತರಲು ಹಲ್ಲು ಮತ್ತು ಉಗುರಿನೊಂದಿಗೆ ಹೋರಾಡುತ್ತಿರುವಾಗ, ಇಂತಹ ಪುರುಷರು ನಮ್ಮ ಸಮಾಜದಲ್ಲಿ ಬೋಟ್‌ನಂತೆ ಇರುತ್ತಾರೆ ಎಂದು ಖುಷ್ಬೂ ಟೀಕಿಸಿದ್ದಾರೆ.

    ಮನ್ಸೂರ್​ಗೆ ವಿವಾದ ಹೊಸದೇನಲ್ಲ
    ಈ ಹಿಂದೆ ಮನ್ಸೂರ್ ಅಲಿಖಾನ್ ಜೈಲರ್ ಚಿತ್ರದ ಕವಲಯ್ಯಾ.. ಹಾಡಿಗೆ ಅನುಚಿತ ಕಾಮೆಂಟ್ ಮಾಡಿದ್ದರು. ಇದೊಂದು ಕೊಳಕು ಹಾಡು ಎಂದು ಜರಿದಿದ್ದರು. ಕಾವಲಯ್ಯ ಹಾಡಿನಲ್ಲಿ ತಮನ್ನಾ ಹೆಜ್ಜೆ ತುಂಬಾ ಕೊಳಕಾಗಿದೆ. ಬೇಕು ಎಂದು ತಾಳ್ಮೆಯಿಂದ ಕೈ ಬೀಸುವುದು ನೋಡಲು ತುಂಬಾ ಅಸಹ್ಯಕರ. ಇಂತಹ ಹಾಡುಗಳು ಮತ್ತು ಸ್ಟೆಪ್​ಗಳಿಗೆ ಸೆನ್ಸಾರ್ ಅಧಿಕಾರಿಗಳು ಏಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಮನ್ಸೂರ್​ ಪ್ರಶ್ನಿಸಿದ್ದರು. ತಾವು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸರಕು ಚಿತ್ರದ ಕೆಲವು ದೃಶ್ಯಗಳನ್ನು ಸೆನ್ಸಾರ್​ ಬೋರ್ಡ್​ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಕಾವಲಯ್ಯ ಹಾಡನ್ನು ಉಲ್ಲೇಖಿಸಿ ಸೆನ್ಸಾರ್​ ಮಂಡಳಿಯ ನಡೆಯನ್ನು ಟೀಕಿಸಿದ್ದರು.

    ಕಸದ ತೊಟ್ಟಿ ಬಳಿ ಬೀದಿ ನಾಯಿ ಜತೆ ಮನ್ಸೂರ್
    ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಸದ ತೊಟ್ಟಿಯ ಪಕ್ಕದಲ್ಲಿ ಬೀದಿ ನಾಯಿಯೊಂದಿಗೆ ಕಾಣಿಸಿಕೊಂಡು ಮನ್ಸೂರ್​ ಎಲ್ಲರ ಗಮನ ಸೆಳೆದಿದ್ದರು. ಮನ್ಸೂರ್​ ಅವರು ಕೊಯಮತ್ತೂರಿನ ತೊಂಡಮುತೂರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪೆರೂರ್​ ಪಟ್ಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಅಂಗಡಿ ವ್ಯಾಪಾರಿಗಳನ್ನು ಭೇಟಿ ಮಾಡಿ ಪ್ರಚಾರ ಮಾಡಿದ್ದರು. ಬಳಿಕ ಹತ್ತಿರದಲ್ಲೇ ಇದ್ದ ಕಸದ ತೊಟ್ಟಿಯ ಬಳಿ ತೆರಳಿದ ಮನ್ಸೂರ್​, ಅಲ್ಲಿ ಬಿದ್ದಿರುವ ಕಸದ ನಿರ್ವಹಣೆ ಜವಬ್ದಾರಿ ಯಾರದ್ದು ಎಂದು ವಿಚಾರಣೆ ಮಾಡಿದರು. ಬಳಿಕ ಅಲ್ಲಿಯೇ ಇದ್ದ ಬೀದಿ ನಾಯಿಯನ್ನು ಕರೆದು ಅದರೊಂದಿಗೆ ಕೆಲ ಕಾಲ ಆಟವಾಡಿದರು. ಈ ವೇಳೆ ಅವರ ಮುಂದೆ ಹಾದುಹೋಗುತ್ತಿದ್ದ ಜನರನ್ನು ತಡೆದು ಸಮಸ್ಯೆಗಳನ್ನು ಆಲಿಸಿ, ನೋಟ್​ಬುಕ್​ನಲ್ಲಿ ವಿಳಾಸದ ಜತೆಗೆ ಬರೆದುಕೊಳ್ಳುತ್ತಿದ್ದರು. ಶಾಸಕನಾದರೆ ಖಂಡಿತ ಸಮಸ್ಯೆಗಳನ್ನು ಬಹೆಹರಿಸುತ್ತೇನೆಂದು ಭರವಸೆ ನೀಡುತ್ತಿದ್ದರು. ಹೀಗೆ ತಮ್ಮ ವಿಭಿನ್ನ ಮತಬೇಟೆಯ ಮೂಲಕ ಮನ್ಸೂರ್​ ಕೊಯಮತ್ತೂರ್​ ಜನರ ಗಮನ ಸೆಳೆದಿದ್ದರು. (ಏಜೆನ್ಸೀಸ್​)

    ‘ಲಿಯೋದಲ್ಲಿ ರೇಪ್​ ಸೀನ್​ ಇರಬೇಕಿತ್ತು’ ಎಂದ ಮನ್ಸೂರ್ ಅಲಿ…’ಇಂತಹ ನೀಚನೊಂದಿಗೆ ಮತ್ತೆ ನಟಿಸಲ್ಲ’ ಎಂದ ತ್ರಿಷಾ…

    ಕಾವಲಯ್ಯ ಹಾಡಿಗೆ ತಮನ್ನಾ ಮಾದಕ ಡಾನ್ಸ್​: ವಿವಾದದ ಕಿಡಿ ಹೊತ್ತಿಸಿದ ನಟ ಮನ್ಸೂರ್​ ಅಲಿ ಖಾನ್​ ಹೇಳಿಕೆ

    ಕಸದ ತೊಟ್ಟಿ ಬಳಿ ಬೀದಿ ನಾಯಿ ಜತೆ ಕಾಣಿಸಿಕೊಂಡ ದಿಗ್ಗಜರು ಚಿತ್ರದ ಖಳನಾಯಕ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts