ಕಾಬೂಲ್: ತಾಲಿಬಾನ್ ಮತ್ತು ಅಫ್ಘಾನಿಸ್ತಾನ ರಕ್ಷಣಾ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮಾಧ್ಯಮವೊಂದರ ಜತೆ ಮಾತನಾಡಿರುವ ತಾಲಿಬಾನ್ ವಕ್ತಾರ, ಪಾಕಿಸ್ತಾನದ ನೆರವು, ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕ್ ಹತ್ಯೆ ಮತ್ತು ಭಾರತೀಯ ಆಸ್ತಿಗಳನ್ನು ಗುರಿಯಾಗಿಸಲು ಐಎಸ್ಐ ಸೂಚನೆ ಮುಂತಾದ ವಿಚಾರಗಳ ಬಗ್ಗೆ ಹೇಳಿದ್ದಾರೆ.
ಸಂಘರ್ಷದ ಪ್ರಸ್ತುತ ಸ್ಥಿತಿಯ ಬಗ್ಗೆ ತಾಲಿಬಾನ್ ವಕ್ತಾರ ಮಾತನಾಡಿದ್ದು, ನಾವು ಆಫ್ಗಾನ್ನ ಶೇ. 85ರಷ್ಟು ಭಾಗವನ್ನು ಸುತ್ತುವರಿದಿದ್ದೇವೆ ಮತ್ತು ಆದಷ್ಟು ಬೇಗ ಉಳಿದ 15ರಷ್ಟು ಭಾಗವನ್ನು ಸಹ ನಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.
ಪಾಕಿಸ್ತಾನದ ಐಎಸ್ಐ ನೆರವು ನೀಡುತ್ತದೆಯೇ ಎಂಬ ಪ್ರಶ್ನೆಗೆ, ಇಲ್ಲ ಅದು ನಮ್ಮ ಶತ್ರುಗಳು ಮಾಡಿರುವ ಅಪಪ್ರಚಾರವಷ್ಟೇ. ನಾವು, ನಮ್ಮದೇ ಆದ ಸ್ವಂತ ಬಲದಿಂದ ಹೋರಾಡುತ್ತಿದ್ದೇವೆ ಎಂದು ವಕ್ತಾರ ಹೇಳಿದರು. ಇದೇ ವೇಳೆ ತಾಲಿಬಾನ್ ನಿಯಮಗಳಿಂದ ಮಹಿಳೆಯರು ಭಯಭೀತರಾಗಿದ್ದಾರೆ ಎಂದಾಗ, ಇಲ್ಲ ಅದು ಸುಳ್ಳು. ನಾವು ಆಫ್ಘಾನ್ನ ಎಲ್ಲ ಮಹಿಳೆಯರಿಗೂ ಎಲ್ಲ ಹಕ್ಕುಗಳನ್ನು ನೀಡುತ್ತೇವೆ ಎಂದರು.
ಮಹಿಳೆಯರ ಚಟುವಟಿಕೆ ಮತ್ತು ಉದ್ಯೋಗಕ್ಕೆ ತಾಲಿಬಾನ್ ನಿರ್ಬಂಧಗಳನ್ನು ಹೇರಿದೆ ಎಂಬ ಪೋಸ್ಟರ್ಗಳು ಇತ್ತೀಚೆಗೆ ಆಫ್ಘಾನ್ನ ಬೀದಿಗಳಲ್ಲಿ ಕಾಣಿಸಿಕೊಂಡವು. ಆದರೆ, ಇದನ್ನು ತಾಲಿಬಾನ್ ವಕ್ತಾರ ನಿರಾಕರಿಸಿದ್ದು, ನಿಯಮಗಳು ಕುರಿತಾದ ಯಾವುದೇ ಪೋಸ್ಟರ್ಗಳನ್ನು ಅಂಟಿಸಿಲ್ಲ ಅಥವಾ ಯಾವುದೇ ನಿಯಮಗಳನ್ನು ಉಲ್ಲೇಖಿಸಿಲ್ಲ, ಈ ಪೋಸ್ಟರ್ಗಳೆಲ್ಲ ನಮ್ಮ ಹೆಸರು ಕೆಡಿಸಲು ನಮ್ಮ ಶತ್ರುಗಳು ಮಾಡಿರುವ ಕುತಂತ್ರವೆಂದು ಆರೋಪಿಸಿದರು.
ಇದೇ ವೇಳೆ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕ್ ಹತ್ಯೆ ಕುರಿತು ಮಾತನಾಡಿ, ಸಿದ್ದಿಕ್ರನ್ನು ನಾವು ಕೊಲ್ಲಲಿಲ್ಲ. ಅವರು ನಮ್ಮ ಶತ್ರುಗಳ ಪಡೆಯಲ್ಲಿದ್ದರು. ನಮ್ಮಲ್ಲಿಗೆ ಯಾವುದೇ ಪತ್ರಕರ್ತರು ಬಂದರೆ ನಾವು ಅವರೊಂದಿಗೆ ಸೌಜನ್ಯವಾಗಿಯೇ ಮಾತನಾಡುತ್ತೇವೆ. ದೇಶದಲ್ಲಿರುವ ಪತ್ರಕರ್ತರೊಂದಿಗೆ ನಾವು ಈಗಲೂ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
ಆಫ್ಘಾನ್ನಲ್ಲಿರುವ ಭಾರತೀಯ ಆಸ್ತಿಗಳನ್ನು ನಾಶ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ವಕ್ತಾರ, ಇದು ಕೂಡ ನಮ್ಮ ಶತ್ರುವಿನ ಮತ್ತೊಂದು ಕುತಂತ್ರ. ಯುದ್ಧದ ಸಂದರ್ಭದಲ್ಲಿ ಶತ್ರು ಪಡೆಗಳೇ ಮೂಲಸೌಕರ್ಯಗಳನ್ನು ಹೊಡೆದುರುಳಿಸಿದೆ. ನಾವು ಯಾವುದೇ ಶಾಲೆ ಮತ್ತು ಆಸ್ಪತ್ರೆಗಳನ್ನು ನಾಶ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಏನಿದು ಸಂಘರ್ಷ?
ಆಫ್ಘಾನ್ ವಲಯದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ಮತ್ತು ಆಫ್ಘಾನ್ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದೆ. ಕಳೆದ ಕೆಲವು ತಿಂಗಳುಗಳಿಂದ, ಯುದ್ಧ ಪೀಡಿತ ದೇಶದಲ್ಲಿ ತಾಲಿಬಾನ್ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಆಸ್ತಿಗಳನ್ನು ಟಾರ್ಗೆಟ್ ಮಾಡಲು ಪಾಕಿಸ್ತಾನವು ತಾಲಿಬಾನ್ಗೆ ಸಹಕಾರ ನೀಡುತ್ತಿರುವ ಆರೋಪವು ಕೇಳಿಬಂದಿದೆ.
ತೀವ್ರ ಘರ್ಷಣೆ ಹಿನ್ನೆಲೆಯಲ್ಲಿ ಜುಲೈ 11 ರಂದು ಕಂದಹಾರ್ನ ಕಾನ್ಸುಲೇಟ್ನಿಂದ ಭಾರತೀಯ ಸಿಬ್ಬಂದಿಯನ್ನು ಸ್ಥಳಾಂತರಿಸಿ ಮತ್ತೆ ಭಾರತಕ್ಕೆ ಕರೆತರಲಾಯಿತು. ಗುಪ್ತಚರ ವರದಿಗಳು ಕಂದಹಾರ್ ಮತ್ತು ಮಜಾರ್-ಎ-ಶೇರ್ಫ್ನಲ್ಲಿರುವ ಭಾರತೀಯ ದೂತಾವಾಸಗಳಿಗೆ ಬೆದರಿಕೆ ಹೆಚ್ಚಾಗಿದೆ ಎಂದು ಸೂಚಿಸಿದೆ. (ಏಜೆನ್ಸೀಸ್)
ಅಫ್ಘಾನಿಸ್ತಾನ ಸಂಘರ್ಷದಲ್ಲಿ ಪುಲಿಟ್ಜರ್ ಪ್ರಶಸ್ತಿ ವಿಜೇತ, ಭಾರತೀಯ ಫೋಟೋ ಜರ್ನಲಿಸ್ಟ್ ಹತ್ಯೆ
ಬ್ಲೂ ಫಿಲ್ಮ್ ದಂಧೆಯಲ್ಲಿ ರಾಜ್ ಕುಂದ್ರಾ ಸಿಕ್ಕಿಬಿದ್ದಿದ್ಹೇಗೆ? ಮುಂಬೈನ ಕರಾಳ ಲೋಕ ಬಿಚ್ಚಿಟ್ಟ ಪೊಲೀಸ್ ಆಯುಕ್ತ!
ಕಾಂಗ್ರೆಸ್ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಸ್ಥಿತಿ ಗಂಭೀರ: ಸೋನಿಯಾ, ರಾಹುಲ್ ದೂರವಾಣಿ ಕರೆ