ನವದೆಹಲಿ: ವಿಶ್ವಪ್ರಸಿದ್ಧ ತಾಜ್ಮಹಲ್ ಇರುವ ಆಗ್ರಾ ನಗರದಲ್ಲಿ ಕೋವಿಡ್ 19 ಪಿಡುಗು ಜೋರಾಗಿದೆ. ಇದನ್ನು ತಡೆಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕೋರಿ ಸೇವ್ ಆಗ್ರಾ ಎಂಬ ಹೆಸರಿನಲ್ಲಿ ಅಲ್ಲಿನ ಮೇಯರ್ ಬರೆದಿರುವ ಪತ್ರಕ್ಕೆ ತಕ್ಷಣವೇ ಸ್ಪಂದಿಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.
ಆಗ್ರಾ ಮೇಯರ್ ನವೀನ್ ಜೈನ್ ಏಪ್ರಿಲ್ 21ರಂದು ಬರೆದಿರುವ ಪತ್ರ ಸಹಿತ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಆಗ್ರಾದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಗರದಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡಗಟ್ಟಲು ಈಗಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಶನಿವಾರ ಕೂಡ ನಾನು ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಈ ವಿಷಯದಲ್ಲಿ ಪಾರದರ್ಶಕತೆ ಹೊಂದುವುದು ಅವಶ್ಯವಾಗಿದೆ. ಟೆಸ್ಟಿಂಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಮರ್ಪಕವಾದ ಮಾಹಿತಿ ನೀಡುವ ಜತೆಗೆ ಸರಿಯಾದ ಚಿಕಿತ್ಸೆ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಆಗ್ರಾ ಮತ್ತು ಮೊರಾದಾಬಾದ್ನಲ್ಲಿ ಶನಿವಾರ ಕರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದರು. ಶಹರನ್ಪುರ (37), ಆಗ್ರಾ (25), ಕಾನ್ಪುರ (24), ಲಖನೌ (19) ಸಂತ ಕಬೀರ ನಗರ (19) ಮತ್ತು ಬರೇಲಿ (11) ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಆಗ್ರಾ ಜಿಲ್ಲೆಯೊಂದರಲ್ಲೇ 345 ಆ್ಯಕ್ಟೀವ್ ಪ್ರಕರಣಗಳು ಇವೆ.
ಸಚಿನ್ಗೆ ಏನೂ ಅನ್ನಲು ಹೋಗಬೇಡಿ… ಅಂದಿರಿ ಎಂದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ… ಯಾರು, ಯಾರಿಗೆ ಎಚ್ಚರಿಸಿದ್ದರು?