ನವದೆಹಲಿ: ದೆಹಲಿ-ಹರಿಯಾಣ ಗಡಿಭಾಗವಾದ ಸಿಂಘುವಿನ ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದ ವ್ಯಕ್ತಿಯೊಬ್ಬ ದೆಹಲಿ ಪೊಲೀಸರ ಕಾರು ಕದಿಯುವ ಪ್ರಯತ್ನ ಮಾಡಿದ್ದಲ್ಲದೆ, ತಡೆಯಲು ಹೋದ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಪಂಜಾಬ್ ನಿವಾಸಿ ಹರ್ಪ್ರೀತ್ ಸಿಂಗ್ ಎಂಬುವವನೇ ಈ ಕೃತ್ಯ ಎಸಗಿದವ.
ದೆಹಲಿಯ ಹೊರಭಾಗದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಮತ್ತಿನಲ್ಲಿದ್ದ ಎನ್ನಲಾದ ಹರ್ಪ್ರೀತ್ ಸಿಂಗ್, ದೆಹಲಿ ಪೊಲೀಸರ ಕಾರು ಕದ್ದು ಓಡಿಸಿಕೊಂಡು ಹೋಗಿದ್ದಾನೆ. ಅವನನ್ನು ತಡೆಯಲು ಹೋದ ಪೊಲೀಸರಲ್ಲಿ ಒಬ್ಬ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ಬಿಟ್ಟು, ಸ್ಕೂಟರ್ ಒಂದನ್ನು ಬಳಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ.
ಇದನ್ನೂ ಓದಿ: ರೈತರ ಪ್ರತಿಭಟನೆ: 18 ಮಂದಿ ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲು, ಒಬ್ಬರ ಸ್ಥಿತಿ ಗಂಭೀರ
ಕೊನೆಗೂ ಸಿಂಗ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಲ್ಲೆ ಮತ್ತು ಕಳ್ಳತನದ ಕೇಸುಗಳನ್ನು ದಾಖಲಿಸಲಾಗಿದೆ. ಹಲ್ಲೆಗೊಳಗಾದ ಸಮಯ್ಪುರ್ ಬದ್ಲಿ ಪೊಲೀಸ್ ಠಾಣಾಧಿಕಾರಿ ಆಶಿಶ್ ದುಬೆಯ ಕತ್ತು ಮತ್ತು ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ಕಳೆದ ವಾರವಷ್ಟೇ ಟಿಕ್ರಿ ಪ್ರದೇಶದಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಚಳುವಳಿಕಾರನೊಬ್ಬ ಥಳಿಸಿದ್ದ ಘಟನೆ ವರದಿಯಾಗಿತ್ತು.(ಏಜೆನ್ಸೀಸ್)
ಗ್ರೆಟಾ ಟೂಲ್ಕಿಟ್ ಪ್ರಕರಣ : ವಕೀಲೆ ನಿಕಿತಾ ಜೇಕಬ್ಗೆ ನಿರೀಕ್ಷಣಾ ಜಾಮೀನು