ಮಂಗಳೂರು: ನಗರದ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ರೀತಿಯಲ್ಲಿ ಸ್ಫೋಟ ಸಂಭವಿಸಿದೆ.
ನಾಗುರಿಯಿಂದ ಪಂಪ್ವೆಲ್ ಕಡೆಗೆ ಆಟೋರಿಕ್ಷಾ ಸಂಚರಿಸುತ್ತಿತ್ತು. ನಾಗುರಿಯಲ್ಲಿ ಆಟೋ ರಿಕ್ಷಾ ಏರಿದ್ದ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಈ ಸಂದರ್ಭ ದಟ್ಟ ಹೊಗೆ ಆವರಿಸಿಕೊಂಡಿದೆ. ಈ ವೇಳೆ ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ಗಾಯವಾಗಿದೆ. ಆಟೋ ಚಾಲಕನಿಗೂ ತರಚು ಗಾಯವಾಗಿದೆ. ಅಟೋ ಒಳಭಾಗ ಸುಟ್ಟು ಹೋಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಬ್ದ ಹಾಗೂ ದಟ್ಟ ಹೊಗೆ ಒಮ್ಮಿಂದೊಮ್ಮೆಲೆ ಹೊಮ್ಮಿದ ಪರಿಣಾಮ ಸ್ಥಳೀಯರು ಒಂದು ಕ್ಷಣ ಗಾಬರಿಗೊಂಡಿದ್ದು, ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಬೆಂಕಿ ಕಾಣಿಸಿಕೊಂಡಿದೆ ಎಂದು ಅಟೋ ಚಾಲಕ ಹೇಳುತ್ತಿದ್ದಾನೆ. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲಾಗುತ್ತದೆ. ಸ್ಫೋಟದ ಬಗ್ಗೆ ಪ್ರತ್ಯಕ್ಷಸಾಕ್ಷಿಗಳು ಏನು ಹೇಳಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಗೊಂದಲದ ಹೇಳಿಕೆ: ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ನಾನು ಮೈಸೂರಿನಿಂದ ಬಂದಿದ್ದು, ನನ್ನ ಅಣ್ಣ ಬಾಬುರಾವ್ಗೆ ಕರೆ ಮಾಡಿ ಎಂದು ಹೇಳಿದ್ದಾನೆ. ಆತ ನೀಡಿದ ನಂಬರ್ಗೆ ಕರೆ ಮಾಡಿದಾಗ ಆತ ನನ್ನ ತಮ್ಮನ್ನಲ್ಲ, ಬಾಡಿಗೆ ರೂಮ್ ಪಡೆದಿದ್ದಾನೆ. ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದಾಗಿ ಅವರು ತಿಳಿಸಿದ್ದಾರೆ.