ಚೆನ್ನೈ: ಪ್ರಸಕ್ತ ಸಾಲಿನ ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ವಾಣಿ ಜಯರಾಂ ಅವರು ಚೆನ್ನೈನ ನುಂಗಂಬಾಕಮ್ನಲ್ಲಿನ ಹದ್ದೌಸ್ ರಸ್ತೆಯಲ್ಲಿರುವ ನಿವಾಸದಲ್ಲಿ ನಿನ್ನೆ (ಫೆ.4) ಕೊನೆಯುಸಿರೆಳೆದರು. ಇದೀಗ ಅವರ ಸಾವಿನ ಕುರಿತು ಕೆಲ ಅನುಮಾನಗಳು ಹುಟ್ಟುಕೊಂಡಿದ್ದು, ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2018ರಲ್ಲಿ ವಾಣಿ ಜಯರಾಂ ಅವರ ಗಂಡ ತೀರಿಕೊಂಡರು. ಬಳಿಕ ಒಬ್ಬರೇ ವಾಸಿಸುತ್ತಿದ್ದರು. ಅವರ ಮನೆಯಲ್ಲಿ ನಿತ್ಯವು ಕೆಲಸ ಮಾಡುವ ಮನೆಗೆಲಸದಾಕೆ ಮಲಾರ್ಕೋಡಿ ಎಂಬಾಕೆ ಎಂದಿನಂತೆ ಬೆಳಗ್ಗೆ 11 ಗಂಟೆಗೆ ಅವರ ಮನೆಗೆ ಬಂದಳು. ಆದರೆ, ಮನೆ ಲಾಕ್ ಆಗಿತ್ತು. ಎಷ್ಟು ಬಾರಿ ಬೆಲ್ ಮಾಡಿದರೂ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ತಕ್ಷಣ ವಾಣಿ ಜಯರಾಂ ಅವರ ಸಹೋದರಿ ಉಮಾ ಅವರಿಗೆ ಮಲಾರ್ಕೋಡಿ ಮಾಹಿತಿ ನೀಡಿದಳು.
ಇದಾದ ಬಳಿಕ ಉಮಾ ಮತ್ತು ಮಲಾರ್ಕೋಡಿ ಇಬ್ಬರು ನಕಲಿ ಕೀ ಬಳಸಿ ಮನೆಯನ್ನು ಪ್ರವೇಶಿಸಿದ್ದಾರೆ. ಈ ವೇಳೆ ವಾಣಿ ಜಯರಾಂ ಅವರು ಬೆಡ್ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಹಣೆಯಲ್ಲಿ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈ ಕಿಲ್ಪೌಕ್ ಆಸ್ಪತ್ರೆಗೆ ರವಾನಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಪೊಲೀಸರ ವಿಧಿವಿಜ್ಞಾನ ತಂಡ ವಾಣಿ ಜಯರಾಂ ಅವರ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದೆ. ಟ್ರಿಪ್ಲಿಕೇನ್ನ್ ಡಿಸಿಪಿ ಶೇಖರ್ ದೇಶಮುಖ್ ಮಾತನಾಡಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಹೆಚ್ಚಿನ ವಿವರಗಳನ್ನು ತಿಳಿಯಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು. (ಏಜೆನ್ಸೀಸ್)
ರೋಗಪತ್ತೆ ಕೇಂದ್ರಗಳಿಂದ ಆಪತ್ತು; ಡಯಾಗ್ನಾಸ್ಟಿಕ್ ಕೇಂದ್ರಗಳಿಂದ ವಿಕಿರಣ ಆತಂಕ | ಎಇಆರ್ಬಿ ಲೆಕ್ಕಕ್ಕಿಲ್ಲ