ಬೆಂಗಳೂರು: ಅಂಗಡಿಯಲ್ಲಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಎಎಸ್ಐ ಮತ್ತು ಹೆಡ್ ಕಾನ್ಸ್ಟೆಬಲ್ನನ್ನು ಪೊಲೀಸ್ ಆಯುಕ್ತ ಬಿ. ದಯಾನಂದ್ ಅಮಾನತು ಮಾಡಿದ್ದಾರೆ.
ರಾಜಗೋಪಾಲನಗರ ಠಾಣೆಯ ಎಎಸ್ಐ ರಾಮಲಿಂಗಯ್ಯ ಮತ್ತು ಹೆಡ್ ಕಾನ್ಸ್ಟೆಬಲ್ ಪ್ರಸನ್ನಕುಮಾರ್ ಅಮಾನತುಗೊಂಡವರು. ಇದೇ ತಿಂಗಳು 20ರ ರಾತ್ರಿ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಹೊಯ್ಸಳ ಸಿಬ್ಬಂದಿ ಗಸ್ತಿನಲ್ಲಿ ಇರುವಾಗ ಅಂಗಡಿಯಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಅದನ್ನು ಗಮನಿಸಿ ಆಟೋದಲ್ಲಿ ಬಂದಿದ್ದ ವ್ಯಕ್ತಿ, ‘ಕಳ್ಳ.. ಕಳ್ಳ.. ಪೊಲೀಸ್ ಕಳ್ಳ’ ಎಂದು ಕೂಗಿಕೊಂಡಿದ್ದ.
ಬಳಿಕ ಹೊಯ್ಸಳ ಸಿಬ್ಬಂದಿ ವಾಹನಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಮೊಬೈಲ್ನಲ್ಲಿ ಸೆರೆಹಿಡಿದಿದ್ದ ಈ ದೃಶ್ಯವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಪೊಲೀಸ್ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಮಾಹಿತಿ ಅರಿತು ತನಿಖೆ ನಡೆಸಿದ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್, ರಾಜಗೋಪಾಲನಗರ ಠಾಣೆ ಇನ್ಸ್ಪೆಕ್ಟರ್ ಕಡೆಯಿಂದ ವರದಿ ಪಡೆದು ಅಮಾನತಿಗೆ ಪೊಲೀಸ್ ಆಯುಕ್ತರಿಗೆ ಶಿಾರಸ್ಸು ಮಾಡಿದ್ದರು. ಅದರನ್ವಯ ಬಿ. ದಯಾನಂದ್ ಕ್ರಮ ಕೈಗೊಂಡಿದ್ದಾರೆ. ಎಎಸ್ಐ ಮತ್ತು ಹೆಡ್ ಕಾನ್ಸ್ಟೆಬಲ್ ಹೋಟೆಲ್ನಲ್ಲಿ ಊಟ ಮತ್ತು ನೀರಿನ ಬಾಟಲ್ ಪಡೆದಿದ್ದರು. ಆದರೆ, ಹಣ ವಸೂಲಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.