ನವದೆಹಲಿ: ಒಲಿಂಪಿಕ್ಸ್ ಇತಿಹಾಸದಲ್ಲಿ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಅವಳಿ ಪದಕ ಜಯಿಸಿದ ಭಾರತದ ಏಕೈಕ ಕ್ರೀಡಾಪಟು ಸುಶೀಲ್ ಕುಮಾರ್. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ರಜತ ಪದಕ ಜಯಿಸಿದ್ದರು. ಆದರೆ ಕುಸ್ತಿಪಟು ಸುಶೀಲ್ ಕುಮಾರ್ ಇದೀಗ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾರೆ. ಹಾಗಾದರೆ ಈ ಪ್ರಕರಣದಲ್ಲಿ ತಪ್ಪಿತಸ್ಥರಾದರೆ ಸುಶೀಲ್ ಕುಮಾರ್ ತಾವು ಗೆದ್ದ ಒಲಿಂಪಿಕ್ಸ್ ಪದಕಗಳನ್ನು ವಾಪಸ್ ನೀಡಬೇಕಾಗುತ್ತದೆಯೇ ಎಂಬ ಚರ್ಚೆಯೊಂದು ನಡೆಯುತ್ತಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸಾಮಾನ್ಯವಾಗಿ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಾಗ ಅವರು ಗೆದ್ದ ಒಲಿಂಪಿಕ್ಸ್ ಪದಕಗಳನ್ನು ವಾಪಸ್ ಪಡೆಯುತ್ತದೆ. ಆದರೆ ಕ್ರಿಮಿನಲ್ ಅಪರಾಧಗಳಿಗೂ ಆ ರೀತಿ ಒಲಿಂಪಿಕ್ಸ್ ಪದಕಗಳನ್ನು ವಾಪಸ್ ಪಡೆಯುವ ಯಾವುದೇ ನಿಯಮವನ್ನು ಐಒಸಿ ಹೊಂದಿಲ್ಲ. ಹೀಗಾಗಿ ಸುಶೀಲ್ ಒಲಿಂಪಿಕ್ಸ್ ಪದಕಗಳನ್ನು ಹಿಂದಿರುಗಿಸಬೇಕಾಗಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: 100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!
ಪ್ಯಾರಾಲಿಂಪಿಕ್ಸ್ನಲ್ಲಿ 6 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಜಯಿಸಿರುವ ದಣ ಆಫ್ರಿಕಾದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ 2014ರಲ್ಲಿ ಗೆಳತಿ ರೀವಾ ಸ್ಟೀನ್ಕೆಂಪ್ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಈ ಪ್ರಕರಣದಲ್ಲಿ ತಪ್ಪಿತಸ್ಥರೂ ಆಗಿರುವ ಪಿಸ್ಟೋರಿಯಸ್ ಇನ್ನೂ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಅವರ ಪ್ಯಾರಾಲಿಂಪಿಕ್ ಪದಕಗಳನ್ನು ವಾಪಸ್ ಪಡೆಯಲಾಗಿಲ್ಲ. ಇದೇ ರೀತಿ ಸುಶೀಲ್ ಕೂಡ ಹಾಲಿ ಪ್ರಕರಣದಲ್ಲಿ ಮುಂದೆ ಕಾರಾಗೃಹ ಶಿಕ್ಷೆಗೆ ಗುರಿಯಾದರೂ ಒಲಿಂಪಿಕ್ಸ್ ಪದಕಗಳನ್ನು ಹಿಂದಿರುಗಿಸಬೇಕಾಗಿಲ್ಲ ಎನ್ನಲಾಗುತ್ತಿದೆ.
ಖೇಲ್ರತ್ನ, ಪದ್ಮಶ್ರೀ ವಾಪಸ್?
ಪದಕಗಳನ್ನು ವಾಪಸ್ ಪಡೆಯುವ ಐಒಸಿ ನಿಯಮಗಳಲ್ಲೂ ಕ್ರಿಮಿನಲ್ ಅಪರಾಧಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಆದರೆ ಪ್ರಕರಣದಿಂದಾಗಿ ಈಗಾಗಲೆ ಭಾರತೀಯ ಕ್ರೀಡಾಲೋಕ ಮತ್ತು ಕುಸ್ತಿ ವಲಯ ಸಾಕಷ್ಟು ತಲೆತಗ್ಗಿಸುವಂತೆ ಮಾಡಿರುವ ಸುಶೀಲ್ ಕುಮಾರ್, ತಮ್ಮ ಕ್ರೀಡಾ ಸಾಧನೆಗಳಿಗಾಗಿ ಪಡೆದುಕೊಂಡಿರುವ ಖೇಲ್ರತ್ನ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಬೇಕಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ, ಹಾಲಿ ನಿಯಮ ಪ್ರಕಾರ ಇವುಗಳನ್ನು ವಾಪಸ್ ಪಡೆಯುವ ಅಧಿಕಾರ ರಾಷ್ಟ್ರಪತಿ ಮತ್ತು ಕ್ರೀಡಾ ಸಚಿವಾಲಯಕ್ಕೆ ಇದೆ.
ಪದ್ಮಶ್ರೀ ಪ್ರಶಸ್ತಿಯ ನಿಯಮ ಪ್ರಕಾರ, ಈ ಪ್ರಶಸ್ತಿ ಪುರಸ್ಕೃತರಾದ ಯಾವುದೇ ವ್ಯಕ್ತಿಯಿಂದ ಆ ಪ್ರಶಸ್ತಿಯನ್ನು ವಾಪಸ್ ಪಡೆಯುವ ಮತ್ತು ಪ್ರಶಸ್ತಿ ಪುರಸ್ಕೃತರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಿಹಾಕುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಮಾಜಿ ಗೃಹ ಕಾರ್ಯದರ್ಶಿ ಎನ್. ಗೋಪಾಲಸ್ವಾಮಿ ಅವರು ನೀಡಿರುವ ವಿವರಣೆಗಳ ಪ್ರಕಾರ, ಒಂದೊಮ್ಮೆ ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ಸುಶೀಲ್ಗೆ ನೀಡಿರುವ ಪ್ರಶಸ್ತಿಗಳನ್ನು ರಾಷ್ಟಪತಿ ರದ್ದುಗೊಳಿಸಬಹುದು. ಬಳಿಕ ಪ್ರಕರಣದಲ್ಲಿ ಅವರು ನಿರ್ದೋಷಿಯಾದರೆ, ಪ್ರಶಸ್ತಿ ರದ್ದುಗೊಳಿಸಿದ ಆದೇಶವನ್ನು ರಾಷ್ಟ್ರಪತಿ ವಾಪಸ್ ಪಡೆಯಬಹುದು. ಸುಶೀಲ್ ಕುಮಾರ್ 2011ರಲ್ಲಿ ಪದ್ಮಶ್ರೀ, 2009ರಲ್ಲಿ ಖೇಲ್ರತ್ನ ಮತ್ತು 2006ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯದ ಫಾಲೋಆನ್ ನಿಯಮದ ಬಗ್ಗೆ ಐಸಿಸಿ ಸ್ಪಷ್ಟನೆ
ಗರ್ಲ್ಫ್ರೆಂಡ್ ಜತೆ ಬ್ರೇಕ್ಅಪ್ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್ ಕಿಶನ್?