ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಒಲಿಂಪಿಕ್ಸ್ ಅವಳಿ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ಲಾಕ್ಅಪ್ನಲ್ಲೂ ತಮಗೆ ಪೈಲ್ವಾನರಿಗೆ ನೀಡಲಾಗುವ ಪೌಷ್ಠಿಕ ಆಹಾರಗಳನ್ನೇ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಪೊಲೀಸ್ ಮೆಸ್ನಲ್ಲಿ ಲಭ್ಯವಿರುವ ಆಹಾರಗಳನ್ನೇ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಸುಶೀಲ್ ಕುಮಾರ್ ಬುಧವಾರ 39ನೇ ಜನ್ಮದಿನದ ಸಂಭ್ರಮದಲ್ಲಿರಬೇಕಾಗಿತ್ತು. ಆದರೆ ಕ್ರೈಮ್ ಬ್ರಾಂಚ್ ತನಿಖೆ ಎದುರಿಸುತ್ತಿರುವ ಸುಶೀಲ್ ಲಾಕ್ಅಪ್ನಲ್ಲೇ ಜನ್ಮದಿನವನ್ನು ಕಳೆಯಬೇಕಾಯಿತು. ಅವರು ಸದ್ಯ 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಜನ್ಮದಿನದಂದು ಸುಶೀಲ್ ಕುಮಾರ್ ಹೆತ್ತವರು ಅವರನ್ನು ಭೇಟಿಯಾಗಲು ಬಯಸಿದರೂ, ಪೊಲೀಸರು ಅನುಮತಿ ನೀಡಲಿಲ್ಲ. ತಂದೆ-ತಾಯಿ ನೀಡಿದ ಜನ್ಮದಿನದ ಶುಭಾಶಯವನ್ನು ನಾವೇ ಸುಶೀಲ್ಗೆ ತಲುಪಿಸಿದೆವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ 4 ವಿಕೆಟ್ ಕಬಳಿಸಿದರೆ ಅಶ್ವಿನ್ ಹೊಸ ದಾಖಲೆ!
ದೆಹಲಿಯ ಛತ್ರಶಾಲಾ ಕ್ರೀಡಾಂಗಣದ ಹೊರಗೆ ನಡೆದ 23 ವರ್ಷದ ಪೈಲ್ವಾನ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಸುಶೀಲ್ ಕುಮಾರ್ ತನಿಖೆಗೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂದೂ ದೂರಲಾಗುತ್ತಿದೆ. ಪೊಲೀಸರು ಕೇಳುವ ಹಲವು ಪ್ರಶ್ನೆಗಳಲ್ಲಿ ಕೆಲವಕ್ಕೆ ಮಾತ್ರ ಅವರು ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಮಾನಸಿಕ ವೈದ್ಯರ ನೆರವು ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2008 ಮತ್ತು 2012ರ ಒಲಿಂಪಿಕ್ಸ್ನಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಜಯಿಸಿದ್ದ ಸುಶೀಲ್, ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ 2 ಪದಕ ಜಯಿಸಿದ ದೇಶದ ಏಕಮಾತ್ರ ಕ್ರೀಡಾಪಟುವೆನಿಸಿದ್ದಾರೆ.