| ಸುಚೇತನಾ ನಾಯ್ಕ
‘ಮಗಳು ಸದಾ ಮಗಳಾಗಿಯೇ ಇರುತ್ತಾಳೆ, ಮಗ ಮದುವೆಯಾಗುವವರೆಗೆ ಮಾತ್ರ ಮಗನಾಗಿ ಇರುತ್ತಾನೆ’ ಎಂದಿದ್ದರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ. ಮಗಳಿಗೂ ಮಗನಂತೆಯೇ ಆಸ್ತಿಯಲ್ಲಿ ಸಮಾನ ಅಧಿಕಾರವಿದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಮನೆಯ ಪುತ್ರಿಗೂ ಪುತ್ರನಷ್ಟೇ ಅಧಿಕಾರವಿದೆ ಎಂದು ತೀರ್ಪು ನೀಡಿದ್ದ ಸಂದರ್ಭದಲ್ಲಿ ನ್ಯಾಯಪೀಠದಲ್ಲಿದ್ದ ಅವರು ಈ ಮಾತನ್ನು ಹೇಳಿದ್ದರು.
2018ರಲ್ಲಿ ನೀಡಿರುವ ಈ ತೀರ್ಪು ಪುರುಷ ವರ್ಗವನ್ನು ನಿದ್ದೆಗೆಡಿಸಿತ್ತು. ಆನಂತರ ಇದಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ನಿಂದ ಸುಪ್ರೀಂಕೋರ್ಟ್ವರೆಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವು ಇತ್ಯರ್ಥಕ್ಕೆ ಬಾಕಿ ಇವೆ.
ಇವುಗಳ ಮಧ್ಯೆಯೇ ಇದೀಗ ಸುಪ್ರೀಂಕೋರ್ಟ್ ಇನ್ನೊಂದು ಮಹತ್ವದ ತೀರ್ಪು ನೀಡಿದೆ. ಅದೇನೆಂದರೆ ‘ಮಹಿಳೆಯ ತಂದೆಯ ಉತ್ತರಾಧಿಕಾರಿಗಳಿಗೆ ಮಹಿಳೆ ತನ್ನ ಭಾಗದ ಆಸ್ತಿಯನ್ನು ಕೊಟ್ಟರೆ ಅದು ತಪ್ಪಲ್ಲ, ಆಕೆ ಅವರಿಗೆ ಆಸ್ತಿಯನ್ನು ಕೊಡಲು ಸಂಪೂರ್ಣ ಸ್ವತಂತ್ರಳು, ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿಯೇ ಈ ಬಗ್ಗೆ ಉಲ್ಲೇಖವಾಗಿದೆ’ ಎಂದಿದೆ. ಇಂಥದ್ದೇ ಪ್ರಕರಣಗಳು ಹಲವಾರು ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ನ ಈ ತೀರ್ಪು ಎಲ್ಲರ ಕಣ್ಣು ತೆರೆಸಲಿದೆ.
ಏನಿದು ತೀರ್ಪು?: ಯಾವುದೇ ಮಹಿಳೆ ತನ್ನ ಪಾಲಿಗೆ ಗಂಡನ ಕಡೆಯಿಂದ ಬಂದಿರುವ ಆಸ್ತಿಯ ಭಾಗವನ್ನು ತನ್ನ ತಂದೆಯ ಉತ್ತರಾಧಿಕಾರಿಗಳು ಅರ್ಥಾತ್ ಅವರ ಮಕ್ಕಳಿಗೆ (ಅಂದರೆ ಮಹಿಳೆಯ ಸಹೋದರ, ಸಹೋದರಿಯರು ಹಾಗೂ ಅವರ ಮಕ್ಕಳಿಗೆ) ನೀಡಬಹುದು. ಮಹಿಳೆ ತನ್ನ ಸಹೋದರ ಸಹೋದರಿಯ ಮಕ್ಕಳಿಗೆ ತನ್ನ ಭಾಗದ ಆಸ್ತಿಯನ್ನು ಮಾರಾಟ ಮಾಡಿದರೆ ಅದು ತಪ್ಪಲ್ಲ. ಅದನ್ನು ಪತಿಯ ಕುಟುಂಬದವರು ಸೇರಿದಂತೆ ಯಾರೂ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಗಂಡನಿಂದ ಬಂದಿರುವ ಆಸ್ತಿಯ ಭಾಗವನ್ನು ಮಹಿಳೆಯೊಬ್ಬರು ತನ್ನ ಸಹೋದರನ ಮಕ್ಕಳ ಹೆಸರಿಗೆ ಬರೆದಿರುವುದನ್ನು ಪ್ರಶ್ನಿಸಿ ಗಂಡನ ಸಹೋದರರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಏನಿದು ಕೇಸ್?: ಬದ್ಲು ಎಂಬ ಕೃಷಿಕ ಮೃತಪಟ್ಟ ನಂತರ, ಅವರ ಇಬ್ಬರು ಮಕ್ಕಳಾದ ಬಲಿರಾಮ್ ಹಾಗೂ ಶೇರ್ ಸಿಂಗ್ ಅವರಿಗೆ ಆಸ್ತಿಯ ಸಮಪಾಲು ಸಿಕ್ಕಿತ್ತು. 1953ರಲ್ಲಿ ಶೇರ್ ಸಿಂಗ್ ಮೃತಪಟ್ಟರು. ಅವರಿಗೆ ಮಕ್ಕಳು ಇರಲಿಲ್ಲ. ಶೇರ್ಸಿಂಗ್ ಪಾಲಿನ ಸಂಪೂರ್ಣ ಆಸ್ತಿ ಅವರ ಪತ್ನಿ ಜಿಗ್ನೋ ಪಾಲಾಗುತ್ತದೆ. ತಮಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ಜಿಗ್ನೋ ತಮ್ಮ ಪಾಲಿಗೆ ಬಂದ ಈ ಆಸ್ತಿಯನ್ನು ತಮ್ಮ ಸಹೋದರನ ಮಕ್ಕಳ ಹೆಸರಿಗೆ ಮಾಡುತ್ತಾರೆ. ಇದು ಆಕೆಯ ಮೃತ ಗಂಡನ ಸಹೋದರ ಬಲಿರಾಮ್ನ್ನು ಕೆರಳಿಸುತ್ತದೆ. ಸುಖಾಸುಮ್ಮನೆ ತನ್ನ ಸಹೋದರನ ಆಸ್ತಿ ಹೊರಗಿನವರ ಪಾಲಾಗಿದ್ದನ್ನು ನೋಡಲು ಆಗದ ಅವರು, ಈ ಆಸ್ತಿ ಮಾರಾಟ ಮಾಡಲು ಸಹೋದರನ ವಿಧವಾ ಪತ್ನಿಗೆ ಅಧಿಕಾರ ಇಲ್ಲ ಎಂದು ಕೇಸ್ ದಾಖಲು ಮಾಡುತ್ತಾರೆ. ಈ ಕೇಸ್ ಸಿವಿಲ್ ಕೋರ್ಟ್ನಿಂದ ಸುಪ್ರೀಂಕೋರ್ಟ್ವರೆಗೂ ಹೋಗುತ್ತದೆ. ಇದೀಗ ಸುಪ್ರೀಂಕೋರ್ಟ್ ಕಾನೂನಿನಲ್ಲಿ ಇರುವ ಅಂಶಗಳನ್ನು ಸ್ಪಷ್ಟಪಡಿಸಿದ್ದು ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿ ಜಿಗ್ನೋ ತನಗೆ ಬಂದಿರುವ ಗಂಡನ ಆಸ್ತಿಯನ್ನು ಸಹೋದರನ ಮಕ್ಕಳ ಹೆಸರಿಗೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಆಕೆಯ ಆಸ್ತಿ. ಅದನ್ನು ಪ್ರಶ್ನಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ 15(1)(ಡಿ) ಕಲಮನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ಜಿಗ್ನೋ ತನ್ನ ಆಸ್ತಿಯನ್ನು ತಂದೆಯ ಉತ್ತರಾಧಿಕಾರಿಗಳಾಗಿರುವ ತನ್ನ ಸಹೋದರನ ಮಕ್ಕಳಿಗೆ ನೀಡಿದ್ದು ಸರಿಯಾಗಿದೆ ಎಂದಿದೆ.
ಕಾಯ್ದೆ ಏನು ಹೇಳುತ್ತದೆ?
ಹಿಂದೂ ಉತ್ತರಾಧಿಕಾರ ಕಾಯ್ದೆಯ 15 (1) ರ ಅಡಿಯಲ್ಲಿ ಮಹಿಳೆ ತನ್ನ ಆಸ್ತಿಯನ್ನು ಯಾರಿಗೆ ನೀಡಬಹುದು ಎಂಬ ಬಗ್ಗೆ ಈ ರೀತಿ ಉಲ್ಲೇಖವಾಗಿದೆ. ಹೀಗೆ ನೀಡಿದರೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅದೇನೆಂದರೆ
ಎ) ಮಗ, ಮಗಳು (ಇವರು ಮೃತಪಟ್ಟಲ್ಲಿ ಅವರ ಮಕ್ಕಳು) ಹಾಗೂ ಗಂಡ
ಬಿ) ಗಂಡನ ಉತ್ತರಾಧಿಕಾರಿಗಳು
ಸಿ) ತಂದೆ ಮತ್ತು ತಾಯಿಗೆ
ಡಿ) ತಂದೆಯ ಉತ್ತರಾಧಿಕಾರಿಗಳು
ಇ) ತಾಯಿಯ ಉತ್ತರಾಧಿಕಾರಿಗಳು
ಜೊಮ್ಯಾಟೋ ವಿವಾದದ ಹಿತೇಶಾಗೆ ಎಫ್ಐಆರ್ ಶಾಕ್! ಚಪ್ಪಲಿ ಎಸೆದು ಪೇಚಿಗೆ ಸಿಲುಕಿದ ಇನ್ಫ್ಲೂಯೆನ್ಸರ್
ಇದು ಬೆಂಗಳೂರಿನ ಪ್ರಪ್ರಥಮ ಟ್ರಾಫಿಕ್ ಸಿಗ್ನಲ್; ಇದರ ಸ್ಮರಣಾರ್ಥ 58 ವರ್ಷಗಳ ಬಳಿಕ ಶಿಲಾಫಲಕ ಅಳವಡಿಕೆ