ಬೆಂಗಳೂರು: ಕೇಂದ್ರ ಸರ್ಕಾರ ಕೈಗೊಂಡಿದ್ದ 370ನೇ ವಿಧಿ ರದ್ದತಿ ಆದೇಶವನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನ ಮೂಲಕ ಎತ್ತಿಹಿಡಿದಿದ್ದು, ಇದು ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತೆಗೆ ಒತ್ತಿದ ಮುದ್ರೆ ಎಂದು ಹಿಂದು ಜಾಗರಣ ವೇದಿಕೆ ಬಣ್ಣಿಸಿದೆ.
ದೇಶ ಸ್ವಾತಂತ್ರ್ಯಗೊಂಡ ವೇಳೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಎಸಗಿದ ಐತಿಹಾಸಿಕ ಪ್ರಮಾದವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸರಿಪಡಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿತು. ಅದನ್ನು ಈಗ ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಸ್ವಾರ್ಥಕ್ಕಾಗಿ ದೂರದೃಷ್ಟಿಹೀನ ನೆಹರು ಎಸಗಿದ ಹತ್ತಾರು ರಾಷ್ಟ್ರ ವಿರೋಧಿ ನಿಲುವಿನಲ್ಲಿ ಕಾಶ್ಮೀರದ ಕುರಿತಾದ ನಿಲುವು ಅವಿವೇಕತನದ ಪರಮಾವಧಿಯಾಗಿತ್ತು. ದೇಶದ ಸುರಕ್ಷತೆಗೆ ಪ್ರಬಲ ಕಂಟಕವೆನಿಸಿದ್ದ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸುವ ಇಚ್ಛಾಶಕ್ತಿ ಪ್ರದರ್ಶಸಿದ್ದಯ ಹಾಗೂ ಸಂಸತ್ತಿನಲ್ಲಿ ಆ ಕುರಿತು ಸಮರ್ಥನೆ ಮಾಡಿದ್ದ ಗೃಹಸಚಿವ ಅಮಿತ್ ಶಾ ಹಾಗೂ ಪ್ರಧಾನಿಯವರನ್ನು ವೇದಿಕೆಯು ಅಭಿನಂದಿಸುತ್ತದೆ ಎಂದು ಹಿಂಜಾವೇಯ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ತಿಳಿಸಿದ್ದಾರೆ.
ಈವರೆಗೂ ಓಟಿಗಾಗಿ ಕಾಶ್ಮೀರದ ಪ್ರತ್ಯೇಕವಾದಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಂಡು ಬರುತ್ತಿದ್ದ ಸೋಗಲಾಡಿ ಮೂಲಭೂತವಾದಿ ಶಕ್ತಿಗಳಿಗೆ ಸುಪ್ರೀಂ ತೀರ್ಪು ಕಪಾಳಮೋಕ್ಷವಾದಂತಾಗಿದೆ. ಇದರಿಂದ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಭಾರತಕ್ಕೆ ಸೇರ್ಪಡೆ ಮಾಡಿಕೊಡಲು ಕೇಂದ್ರ ಸರ್ಕಾರಕ್ಕೆ ಬಲ ಸಿಕ್ಕಿದೆ. ಆದಷ್ಟು ಬೇಗ ಶಂಕರಾಚಾರ್ಯರಿಂದ ಪ್ರತಿಷ್ಠಾಪನೆಗೊಂಡಿದ್ದ ಈಗ ಪಾಕ್ ವಶದಲ್ಲಿರುವ ಶಾರದ ಮಂದಿರವನ್ನು ಮುಕ್ತಮಾಡಿ ಕೋಟ್ಯಂತರ ಹಿಂದುಗಳ ಮಾತೆ ಶಾರದೆ ದರ್ಶನ ಪಡೆಯುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.