ಬೆಂಗಳೂರು: ಹವಾಮಾನ ಅಸಮತೋಲನದಿಂದ ರಾಜ್ಯದೆಲ್ಲೆಡೆ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ. ತೇವಾಂಶ ಕೊರತೆಯಿಂದ ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯಪುರ, ಮಂಗಳೂರು, ಚಿತ್ರದುರ್ಗ, ಬೆಂಗಳೂರು, ಮೈಸೂರು, ಮಂಡ್ಯ, ಗೋಕರ್ಣ, ಗದಗ ಮತ್ತು ಕಾರವಾರ ಸೇರಿ ಹಲವೆಡೆ ಬೆಳಗ್ಗೆ 8 ಗಂಟೆಗೆ ರಣಬಿಸಿಲು ಸುಡಲಾರಂಭಿಸಿದೆ. ಕೆಲವೆಡೆ ಬಿಸಿಗಾಳಿ ಬೀಸತೊಡಗಿದೆ.
ಬುಧವಾರ ಕಲಬುರಗಿಯಲ್ಲಿ ಗರಿಷ್ಠ 40.6 ಉಷ್ಣಾಂಶ ದಾಖಲಾಗಿದೆ. ಪೂರ್ವ ಮುಂಗಾರು ಮಳೆ ಕುಂಠಿತ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಕೊರತೆ ಉಂಟಾಗಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ಬೆಳಗ್ಗೆಯಿಂದ ಶುರುವಾಗತೊಡಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಗೋಕರ್ಣ, ಗದಗ, ಕಾರವಾರ ಸೇರಿ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಡಿಗ್ರಿ ಸೆಲ್ಸಿಯಸ್ ಏರಿಯಾಗುವ ನಿರೀೆ ಇದೆ.
ನವೆಂಬರ್ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ವರ್ಷ ಚಳಿಗಾಲದ ಅವಧಿ ಇಳಿಮುಖವಾಗಿತ್ತು. ಆದ್ದರಿಂದ, ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಯಿತು. ಸಾಮಾನ್ಯವಾಗಿ ಮೂರು ತಿಂಗಳು ಇರುತ್ತಿದ್ದ ಬೇಸಿಗೆ ಈ ವರ್ಷ 4 ತಿಂಗಳು ಇರಲಿದೆ. ಈಗಾಗಲೇ ಅರ್ಧ ಅವಧಿ ಮುಗಿದಿರುವ ಬೇಸಿಗೆ ಕಾಲ ಜೂ.15ರವರೆಗೆ ಮುಂದುವರಿಯಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ೆಬ್ರವರಿ 2ನೇ ವಾರದಿಂದಲೇ ಸುಡುಬಿಸಿಲು ಕಾಣಿಸಿಕೊಂಡಿದೆ. ಏಪ್ರಿಲ್ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಿತ್ತು.
ಗರಿಷ್ಠ ತಾಪಮಾನದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ತರಂಗ (ಹೀಟ್ ವೇವ್) ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆ ಶುಷ್ಕ ಸ್ಥಿತಿಯಲ್ಲಿ ಇರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ.
2 ಡಿಗ್ರಿ ಸೆಲ್ಸಿಯಸ್ ಹೆಚ್ಚಳ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವತಿಯಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆಯಾಗುತ್ತಿರುವ ಕುರಿತು ವಿಶೇಷ ಅಧ್ಯಯನ ನಡೆಸಲಾಗಿತ್ತು. 1960ರಿಂದ 1990ರವರೆಗೆ ಹಾಗೂ 1997ರಿಂದ 2017ರವರೆಗೆ ಹವಾಮಾನದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದರ ಬಗ್ಗೆ 2 ಭಾಗಗಳಾಗಿ ವಿಂಗಡಿಸಿ ಉಸ್ತುವಾರಿ ಕೇಂದ್ರ ಅಧ್ಯಯನ ನಡೆಸಿತ್ತು. ಮೊದಲ 30 ವರ್ಷಗಳಲ್ಲಿ ಹವಾಮಾನ ಹೇಗಿತ್ತು? ನಂತರದ 30 ವರ್ಷ ಹವಾಮಾನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬ ಈ ಅಧ್ಯಯನದಲ್ಲಿ ವಾಡಿಕೆಗಿಂತ ಬಿಸಿಲು, ಮಳೆ, ಚಳಿ, ಗರಿಷ್ಠ ಮತ್ತು ಕನಿಷ್ಠ ತಾಪಮಾನದ ಉಷ್ಣಾಂಶ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಮುಂದಿನ ಕೆಲ ವರ್ಷಗಳಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂನ್ಸೂಚನೆ ನೀಡಿತ್ತು. ಈಗಿನ ಹವಾಮಾನ ಬದಲಾವಣೆಯನ್ನು ಜಾಗತಿಕ ತಾಪಮಾನ ಏರಿಕೆ ವ್ಯಾಪ್ತಿಯಲ್ಲಿ ಪರಿಗಣಿಸಲಾಗಿದೆ.
ಕಾಡುತ್ತಿವೆ ಆರೋಗ್ಯ ಸಮಸ್ಯೆ
ತಾಪಮಾನ ಹೆಚ್ಚಾದಂತೆ ಜನರಿಗೆ ತಲೆನೋವು, ವಾಂತಿ, ರ್ನಿಜಲೀಕರಣ, ಸುಸ್ತು ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಬಿಸಿಲು ಲೆಕ್ಕಿಸದೆ ದಿನವಿಡೀ ಕೆಲಸ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ, ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು, ಆಟೋ ಚಾಲಕರು, ಸಂಚಾರ ಪೊಲೀಸರು, ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ಮಿಕರು ಬಿರು ಬೇಸಿಗೆಯಲ್ಲಿ ಕೆಲಸ ಮಾಡಬಾರದು ಎಂದು ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ಕ್ರಮಗಳು:
- ಹೆಚ್ಚು ನೀರು (ಕುದಿಸಿ ಆರಿಸಿದ) ಕುಡಿಯಬೇಕು
- ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ ಉತ್ತಮ
- ತಾಜಾ ಹಣ್ಣು, ತರಕಾರಿ ಬಳಸಿ
- ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಿ
- ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ
- ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರಿ
- ಮದ್ಯಪಾನ, ಧೂಮಪಾನ ಒಳ್ಳೆಯದಲ್ಲ
- ಸುಡು ಬಿಸಿಲಿನಲ್ಲಿ ಓಡಾಡಬಾರದು
- ಹೊರಗೆ ಹೋದಲ್ಲಿ ಛತ್ರಿ, ಕೂಲಿಂಗ್ ಗ್ಲಾಸ್, ಹ್ಯಾಟ್ ಧರಿಸಿ
- ಚರ್ಮದ ರಕ್ಷಣೆಗೆ ಹತ್ತಿ ಉಡುಪು ಧರಿಸಿ, ಸನ್ಸ್ಕ್ರೀನ್ ಲೋಷನ್ ಬಳಸಿ
- ಧೂಳು ಮತ್ತು ಬಿಸಿಲಿನಿಂದ ಕಣ್ಣಿನ ಆರೋಗ್ಯ ರಕ್ಷಣೆಗಾಗಿ ಕೂಲಿಂಗ್ ಗ್ಲಾಸ್ ಧರಿಸಬೇಕು
- ಬೆಚ್ಚಗಿನ/ತಣ್ಣೀರಿನ ಸ್ನಾನ ಒಳ್ಳೆಯದು.