ಕೊಡಗು : ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಹೇಳಿದರು.
ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಲಾರ್ಣವಾ ಒಂದು ತಿಂಗಳ ಬೇಸಿಗೆ ಶಿಬಿರದ ಸಮಾರೋಪದ ಅಂಗವಾಗಿ ರೋಟರಿ ಶಾಲಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಯಾವುದೋ ಒಂದು ವಿಷಯವನ್ನು ಪರಿಚಯ ಮಾಡಬಾರದು. ಅವರಿಗೆ ಎಲ್ಲ ಕ್ಷೇತ್ರದ ಪರಿಚಯವಾಗಬೇಕು. ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ರಜತ ಕಾರ್ಯಪ್ಪ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ಹಿಂದೆ ಬಿದ್ದಿದ್ದಾರೆ. ಓದು, ಆಟ-ಪಾಠ ಅವರಿಗೆ ಬೇಕಾಗಿಲ್ಲ. ಇದರಿಂದ ಅವರ ಆಲೋಚನಾ ಕ್ರಮ ಲಯ ತಪ್ಪುತ್ತಿದೆ. ಮಕ್ಕಳ ಹವ್ಯಾಸಕ್ಕೆ ತಕ್ಕಂತೆ ಅವರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಆದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಸಂಸ್ಥಾಪಕಿ ವಿದುಷಿ ಹೇಮಾವತಿ ಕಾಂತರಾಜ್ ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆ ಹೊರ ಹಾಕಲು ಶಿಬಿರಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೃತ್ಯ ತರಬೇತುದಾರರಾದ ಕಾವ್ಯಾಶ್ರೀ ಕಾಂತರಾಜ್, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಕೌಶಿ ಕಾವೇರಮ್ಮ, ದೃಶ್ಯಾ, ಧನ್ಯಾಶ್ರೀ, ಬಿಯಾಂಕಾ, ತಷ್ಮ ತಂಗಮ್ಮ, ಗಹನಾ, ಶ್ರೇಯಾ,ರೋಹನ್ ಇತರರು ಇದ್ದರು.