ಬೆಳಗಾವಿ: ಸಕ್ಕರೆ ಕಾರ್ಖಾನೆಯವರು 6 ತಿಂಗಳ ಸಂಬಳ ನೀಡಿಲ್ಲ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಪೊಲೀಸರು ಶುಕ್ರವಾರ ರಕ್ಷಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದಾತನನ್ನು ಕೇರಳ ರಾಜ್ಯದ ಅಲಪೂಜೆಲೆ ಗ್ರಾಮದ ನಿವಾಸಿ ವಾಮದೇವನ ಎಂದು ಗುರುತಿಸಲಾಗಿದೆ. ಈತ ರಾಯಬಾಗ ತಾಲೂಕಿನ ರೇಣುಕಾ ಶುಗರ್ಸ್(ಸಕ್ಕರೆ) ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಲೌಕ್ಡೌನ್ ಅವಧಿಯ ಮೂರು ತಿಂಗಳ ಹಾಗೂ ನಂತರ ಮತ್ತೆ ಮೂರು ತಿಂಗಳ ಸಂಬಳ ನೀಡದ ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಡಾ.ಎಂ.ಜಿ.ಹಿರೇಮಠ ಅವರ ಬಳಿ ನ್ಯಾಯ ಕೇಳಲು ಆಗಮಿಸಿದ್ದ. ಕಚೇರಿ ಸಿಬ್ಬಂದಿಯಿಂದ ಸ್ಪಂದನೆ ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಲಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಯಬಾಗದ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಅನೇಕ ವರ್ಷಗಳಿಂದ ವಾಮದೇವನ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ
ವಾಮದೇವನ್ ಸೇರಿ ಹಲವು ಜನರನ್ನು ಕಾರ್ಖಾನೆಯವರು ಬೇರೆಡೆ ವರ್ಗ ಮಾಡಿದ್ದರು. ಆದರೆ, ವರ್ಗಾವಣೆ ಮಾಡದಂತೆ ಮನವಿ ಮಾಡಿಕೊಂಡಿದ್ದರೂ ವರ್ಗಾವಣೆ ಮಾಡಿದ್ದರಿಂದ ಮತ್ತೆ ಮನವಿ ಸಲ್ಲಿಸಿದ್ದ. ಇದರಿಂದಾಗಿ ಕಾರ್ಖಾನೆಯಿಂದ ವಾಮದೇವನನನ್ನು ತೆಗೆದು ಹಾಕಲಾಗಿತ್ತು. ಜತೆಗೆ ಆರು ತಿಂಗಳಿಂದ ವೇತನ ನೀಡಿರಲಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನ್ಯಾಯ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತ ಮಾರ್ಕೆಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಟ್ಟಡದ ಮೇಲೇರಿ ವ್ಯಕ್ತಿಯನ್ನು ವಶಕ್ಕೆ ಪಡೆದು ಬುದ್ಧಿಹೇಳಿ ಕಳುಹಿಸಿದ್ದಾರೆ.