ಬೆಂಗಳೂರು: ಶಿಕ್ಷಕಿಯಾಗಿದ್ದುಕೊಂಡೇ ಸ್ವಅಧ್ಯಯನದಿಂದ 2017ರಲ್ಲಿ (14ನೇ ಬ್ಯಾಚ್) ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 24ನೇ ರಾಂಕ್ ಪಡೆದಿರುವ ಜಯಲಕ್ಷ್ಮಿ ರಾಯಕೋಡ, ಪ್ರಸ್ತುತ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1995ರಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಇವರು, ಎಂಎ, ಬಿ.ಇಡಿ, ಎಂ.ಇಡಿ ಹಾಗೂ ಎಂ.ಫಿಲ್ ಪೂರ್ಣಗೊಳಿಸಿದ್ದು, ಎಸ್ಇಟಿ ಮತ್ತು ಎನ್ಇಟಿಯಲ್ಲಿ ತೇರ್ಗಡೆಯಾಗಿದ್ದಾರೆ. 2007-08ರಲ್ಲಿ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್) ಪರೀಕ್ಷೆಯಲ್ಲೂ 68ನೇ ರಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ರೈತ ಕುಟುಂಬದ ಮಹಿಳೆ
ಗುಲ್ಬರ್ಗಾ ಜಿಲ್ಲೆ ಚಿಂಚೋಳಿ ತಾಲೂಕಿನ ರಾಯಕೋಡದ ರೈತ ಪ್ರಭುಲಿಂಗರೆಡ್ಡಿ ಮತ್ತು ಪ್ರೇಮಾ ಅವರ ಮಗಳು ಜಯಲಕ್ಷ್ಮಿ ಹುಟ್ಟೂರಿನಲ್ಲಿಯೇ 1ರಿಂದ 10ನೇ ತರಗತಿ ಓದಿದ್ದು, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಶಾಲೆಯಲ್ಲಿ ಪಿಯು ಉತ್ತೀರ್ಣರಾಗಿದ್ದಾರೆ. ನೃಪತುಂಗ ವಿದ್ಯಾಲಯದಲ್ಲಿ ಆರ್ಟ್ಸ್ ಪದವಿ ಪೂರ್ಣಗೊಳಿಸಿದ್ದು, ಧಾರವಾಡ ವಿವಿಯಲ್ಲಿ ಎಂಎ ಕನ್ನಡ ಅಧ್ಯಯನ ಮಾಡಿದ್ದಾರೆ. ಅಜ್ಜ-ಅಜ್ಜಿ ಶಿಕ್ಷಕರಾಗಿದ್ದರೂ ತಂದೆ-ತಾಯಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರಷ್ಟೇ, ಕುಟುಂಬ ಸದಸ್ಯರು ಗ್ರೂಪ್ ಸಿ ಕೆಲಸದಲ್ಲಿದ್ದರೂ ಉನ್ನತ ಹುದ್ದೆ ಅಲಂಕರಿಸಿರಲಿಲ್ಲ. ಆ ಕೊರತೆಯನ್ನು ಜಯಲಕ್ಷ್ಮಿ ನೀಗಿಸಿದ್ದಾರೆ.
ಗ್ರಾಮೀಣರೆಂಬ ಕೀಳರಿಮೆ ಬೇಡ
ನಾವು ಗ್ರಾಮೀಣ ಭಾಗದವರು ಹಾಗೂ ಹೆಣ್ಣು ಎಂಬ ಕೀಳು ಭಾವನೆಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಮುಂದಿದ್ದು, ಹೆಚ್ಚಿನವರು ಹಳ್ಳಿಯವರೇ ಆಗಿದ್ದಾರೆ. ಪ್ರಸ್ತುತ ತಂತ್ರಜ್ಞಾನ ಹಾಗೂ ಪತ್ರಿಕೆಗಳಲ್ಲಿ ಲಭ್ಯವಿರುವ ಮಾಹಿತಿಯನ್ನೇ ಬಳಸಿಕೊಳ್ಳಿ, ಕುಟುಂಬದ ಒತ್ತಾಯದ ಬದಲಾಗಿ ಸ್ವಪ್ರೇರಣೆಯಿಂದ ಅಧ್ಯಯನ ಮಾಡಬೇಕು. ಹಣ ಗಳಿಸುವ ಉದ್ದೇಶದ ಬದಲಾಗಿ ಸಮಾಜ ಸೇವೆ ಮಾಡುವ ಗುರಿಯೊಂದಿಗೆ ಹುದ್ದೆಯನ್ನು ಅಲಂಕರಿಸಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸಿನ ಜತೆಗೆ ತೃಪ್ತಿಯೂ ದೊರೆಯುತ್ತದೆ ಎಂದು ಜಯಲಕ್ಷ್ಮಿ ಸಲಹೆ ನೀಡಿದ್ದಾರೆ.
ಕೋಚಿಂಗ್ ಪಡೆದಿಲ್ಲ
2006ರಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದ ನಾನು, ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪಾಠ ಮಾಡುತ್ತಲೇ ಕೆಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಯಾವುದೇ ಕೋಚಿಂಗ್ ಪಡೆದಿಲ್ಲ. ಪದವಿ ಪೂರ್ಣಗೊಳಿಸಿ 10ವರ್ಷದ ಬಳಿಕ ಕೆಎಎಸ್ಗೆ ಅರ್ಜಿ ಸಲ್ಲಿಸಿ 2010ರಲ್ಲಿ ಮೊದಲ ಬಾರಿ ಪರೀಕ್ಷೆ ಎದುರಿಸಿದೆ. ಅದೇ ವರ್ಷ ಸಂದರ್ಶನದವರೆಗೂ ತಲುಪಿದ್ದೆ. 2011ರಲ್ಲಿ ಕೆಲ ಅಂಕಗಳಿಂದ ಹಿನ್ನಡೆಯಾಗಿತ್ತು. 2014ರಲ್ಲಿ ಕೊನೆ ಪ್ರಯತ್ನವೆಂದು ಪರೀಕ್ಷೆ ಬರೆದಾಗ ತೇರ್ಗಡೆಯಾದೆ. ಸತತ ಪ್ರಯತ್ನವಿದ್ದರೆ ಅಂದುಕೊಂಡ ಗುರಿ ತಲುಪಬಹುದು ಎಂದು ಜಯಲಕ್ಷ್ಮಿಅನುಭವ ಹಂಚಿಕೊಂಡಿದ್ದಾರೆ.
ನೋಟ್ಸ್ಗೆ ಮಾರುಹೋಗಬೇಡಿ
ರೆಡಿಮೇಡ್ ನೋಟ್ಸ್ಗಳನ್ನು ದುಡ್ಡುಕೊಟ್ಟು ಖರೀದಿಸಿ ಮೋಸಹೋಗಬೇಡಿ. ಪರೀಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ಸಂಪೂರ್ಣ ಓದಿ ಸ್ವತಃ ನೀವೇ ನೋಟ್ಸ್ ಮಾಡಿಕೊಳ್ಳಿ, ನಂತರ ತಜ್ಞರು ಬರೆದಿರುವ ಪುಸ್ತಕಗಳನ್ನೂ ಅಧ್ಯಯನ ಮಾಡಬೇಕು. ಇದನ್ನು ಬಳಸಿ ತಿಂಗಳಿಗೊಮ್ಮೆ ಪುನರ್ಮನನ ಮಾಡಬೇಕು. ರೆಡಿಮೇಡ್ ಆಹಾರ ಮತ್ತು ನೋಟ್ಸ್ ಒಳ್ಳೆಯದಲ್ಲ. ಪೂರ್ವಭಾವಿ, ಮುಖ್ಯ ಪರೀಕ್ಷೆ ಜತೆಗೆ ಸಂದರ್ಶನಕ್ಕೂ ಒಮ್ಮೆಲೇ ತಯಾರಿ ನಡೆಸಬೇಕು. ಓದಿರುವ ವಿಷಯವನ್ನು ಮೌಲ್ಯಮಾಪಕರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ವಿವರಿಸುವ ಬರವಣಿಗೆ ರೂಢಿಸಿಕೊಳ್ಳಬೇಕು. ಯಥಾವತ್ ಉತ್ತರ ಬರೆಯುವ ಬದಲು ಸ್ವಂತಿಕೆಯಿಂದ ವಿಶ್ಲೇಷಣೆ ಮಾಡಿ ಎಂದು ಜಯಲಕ್ಷ್ಮಿ ಸಲಹೆ ನೀಡಿದ್ದಾರೆ.
ತೃಪ್ತಿಕೊಟ್ಟ ಸೇವಾನುಭವ
2017 ಸೆ.23ರಂದು ಜಾಯಿನ್ ಆಗಿ ತರಬೇತಿ ಮುಗಿಸಿ 2019ರಲ್ಲಿ ರಾಯಚೂರ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಯಾಗಿದ್ದೆ. ಕರೊನಾ ಸಂದರ್ಭದಲ್ಲಿ (2019-20) ಹೊಸಪೇಟೆ ನಗರಸಭೆ ಆಯುಕ್ತೆಯಾಗಿದ್ದಾಗ ಮಾಡಿರುವ ಸೇವೆಯನ್ನು ಜನರು ಈಗಲೂ ಸ್ಮರಿಸುತ್ತಾರೆ. 2020ರಲ್ಲಿ ಬೆಂಗಳೂರಿನಲ್ಲಿ ಆರ್ಡಿಡಬ್ಲ್ಯುಎಸ್ಡಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದು, 2021 ರಿಂದ 2023ರವರೆಗೆ ಕಾರವಾರದಲ್ಲಿ ಸಹಾಯಕ ಆಯುಕ್ತೆಯಾಗಿ ಜನರ ಮನೆಬಾಗಿಲಿಗೆ ತೆರಳಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ಸಾರ್ವಜನಕರ ಧನ್ಯತೆ ಭಾವವೇ ನಮಗೆ ತೃಪ್ತಿ ಕೊಡುತ್ತದೆ ಎಂದು ಜಯಲಕ್ಷ್ಮಿ ಅನುಭವ ಹಂಚಿಕೊಂಡರು.
ರುದ್ರಯ್ಯ ಎಸ್.ಎಸ್. ಬೆಂಗಳೂರು
ಕೇವಲ 12ನೇ ವಯಸ್ಸಿಗೆ ಮದುವೆಯಾಗಿ 2 ರೂ.ಸಂಪಾದಿಸುತ್ತಿದ್ದ ಕಲ್ಪನಾ ಸರೋಜ್ ಇಂದು 900 ಕೋಟಿ ಆಸ್ತಿ ಒಡತಿ