ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿ ಕರ್ತವ್ಯದ ಸಮಯವನ್ನು ಬೆಳಗ್ಗೆ 9 ರಿಂದ ರಾತ್ರಿ 7 ಗಂಟೆವರೆಗೂ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಬೆಳಗ್ಗೆ 10ರಿಂದ ಸಂಜೆ 5.30 ವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದರು.
ಆದರೆ, ಇದೀಗ ಜನ ಸಂದಣಿಯನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ನೋಂದಣಿ ನಿಯಮಗಳ 1965ರ ನಿಯಮ 4 ಅನ್ವಯ ಬೆಳಗ್ಗೆ 9 ರಿಂದ 7 ಗಂಟೆವರೆಗೂ ಅವಧಿ ವಿಸ್ತರಿಸಲಾಗಿದೆ. ನೋಂದಣಿ ಉಪ ಮಹಾಪರಿವೀಕ್ಷಕರು ಮಂಗಳವಾರ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೂ ಜಾರಿಯಲ್ಲಿ ಇರಲಿದೆ ಎಂದು ಸೂಚಿಸಿದ್ದಾರೆ.
ಇದಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನೋಂದಣಿ ಕಚೇರಿಯಲ್ಲಿ ಇರುವ ಹಳೆಯ ಕಂಪ್ಯೂಟರ್ ಬದಲಾಯಿಸಿ ಸರ್ವರ್ ಸಮಸ್ಯೆ ಬಗೆಹರಿಸಿದರೆ ಸಾಕು. ಇರುವ ಸಮಯದಲ್ಲೇ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬಹುದು. ಹಳೆಯ ಕಂಪ್ಯೂಟರ್ಗೆ ಓಬಿರಾಯನ ಕಾಲದ ಸರ್ವರ್ ನೀಡಲಾಗಿದೆ. ಕಾವೇರಿ ತಂತ್ರಾಂಶಕ್ಕೂ ವೇಗ ಕೊಟ್ಟಿಲ್ಲ. ಅದನ್ನೇ ಪ್ಯಾಚಪ್ ಮಾಡಿ ಸೇವೆಗೆ ಒದಗಿಸಲಾಗಿದೆ. ಇಲಾಖೆಯಲ್ಲಿ ಮೂಲ ಸಮಸ್ಯೆ ಪರಿಹರಿಸದೆ ಸಮಯ ವಿಸ್ತರಣೆ ಮಾಡುವುದರಿಂದ ನೌಕರರ ಮೇಲೆ ಒತ್ತಡ ಹೇರಿದಂತಾಗಲಿದೆ ಎಂಬ ಅಸಮಾಧಾನಗಳು ಕೇಳಿಬಂದಿವೆ.
‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್