ಭರಮಸಾಗರ: ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ 120 ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಭರಮಸಾಗರ, ಚಿತ್ರದುರ್ಗ, ದಾವಣಗೆರೆ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಚೇತರಿಸಿಕೊಂಡಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಎಂದಿನಂತೆ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವನೆ ಬಳಿಕ ಪಾಠಕ್ಕೆ ಕಿವಿಗೊಟ್ಟಿದ್ದರು. ಸ್ವಲ್ಪ ಹೊತ್ತಿನಲ್ಲಿ ಕೆಲವರಲ್ಲಿ ಹೊಟ್ಟೆನೋವು, ತಲೆ ಸುತ್ತು, ವಾಂತಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಇತರ ಮಕ್ಕಳೂ ಇದೇ ರೀತಿ ಬಳಲಿದರು.
ಆತಂಕಕ್ಕೀಡಾದ ಶಿಕ್ಷಕರು ಆಸ್ಪತ್ರೆಗೆ ಹಾಗೂ ಪಾಲಕರಿಗೆ ವಿಷಯ ಮುಟ್ಟಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಆ್ಯಂಬುಲೆನ್ಸ್ ಮೂಲಕ ಮಕ್ಕಳನ್ನು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸಿದರು.
ಈ ಪೈಕಿ 58 ಮಕ್ಕಳು ಇಲ್ಲಿಯೇ ದಾಖಲಾದರೆ, 28 ಮಕ್ಕಳನ್ನು ತುರ್ತು ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. 24 ವಿದ್ಯಾರ್ಥಿಗಳನ್ನು ಅವರ ಪಾಲಕರು ದಾವಣಗೆರೆಗೆ ಕರೆದೊಯ್ದರು. ಶಾಸಕ ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಬಿಇಒ ಸಿದ್ದಪ್ಪ ಆಸ್ಪತ್ರೆಗೆ ಆಗಮಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಕಳೆನಾಶಕ ಸಿಂಪಡಿಸಿದ ಸೊಪ್ಪಿನ ಬಳಕೆ?
ಕಳೆನಾಶಕ ಸಿಂಪಡಿಸಿದ ಸೊಪ್ಪಿನ ಬಳಕೆ ಹಾಗೂ ಅನ್ನದಲ್ಲಿ ಕಂಡು ಬಂದ ಹುಳುಗಳೇ ಮಕ್ಕಳ ಅಸ್ವಸ್ಥತೆಗೆ ಕಾರಣ ಎಂದು ಶಂಕಿಸಲಾಗಿದೆ. ಈ ಸಂಬಂಧ ಪಾಲಕರು ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಆಕ್ರೋಶ ಹೊರಹಾಕಿದ್ದಾರೆ.
ಊಟಕ್ಕೆ ಅನ್ನ ಹಾಗೂ ಸೊಪ್ಪಿನ ಸಾರು ಮಾಡಲಾಗಿತ್ತು. ಸೊಪ್ಪನ್ನು ಸ್ಥಳೀಯವಾಗಿ ಖರೀದಿಸಲಾಗಿತ್ತು. ಇತ್ತೀಚೆಗೆ ಸೊಪ್ಪಿಗೂ ಕಳೆನಾಶಕ ಸಿಂಪಡಿಸುತ್ತಿರುವ ಕಾರಣ ಅದರ ಅಂಶಗಳಿಂದ ಹೀಗಾಗಿರಬಹುದು ಎಂದು ಕೆಲವರು ಸಂದೇಹ ವ್ಯಕ್ತಪಡಿಸಿದ್ದಾರೆ. ಬಿಸಿಯೂಟದ ಅಕ್ಕಿಯಲ್ಲಿ ಹುಳುಗಳು ಇದ್ದವು. ಅನ್ನದಲ್ಲಿಯೂ ಹುಳುಗಳು ಕಂಡು ಬಂದವು. ಅವನ್ನು ಶಿಕ್ಷಕರಿಗೆ ತೋರಿಸಿದ್ದಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳನೇಕರು ತಿಳಿಸಿದರು.
ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ
ಪ್ರೇಯಸಿಯ ರುಂಡ ಕಡಿದ ಪ್ರೇಮಿ; ಕೊಲೆಗಾರನನ್ನು ತನಗೊಪ್ಪಿಸಿ ಎಂದು ಸ್ಟೇಷನ್ ಮುಂದೆ ರೊಚ್ಚಿಗೆದ್ದ ಅಣ್ಣ..