ಕೋಲಾರ: ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಜಿಲ್ಲೆಯ ಗಡಿಗೆ ವಿಜಯೇಂದ್ರ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಪೂಜೆಯ ನಂತರ ಮುಳಬಾಗಿಲು ದೋಸೆ ಸವಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಭಾರತವನ್ನು ಶಕ್ತಿಶಾಲಿಯನ್ನಾಗಿಸಿ ಮುನ್ನಡೆಸಿಕೊಂಡು ಹೋಗುತ್ತಿರುವ ನೇಂದ್ರ ಮೋದಿ ಅವರು 3ನೇ ಸಲಕ್ಕೆ ಪ್ರಧಾನಿಯಾಗಬೇಕು ಎಂದು ಗಣೇಶನದಲ್ಲಿ ಪ್ರಾರ್ಥಿಸಿದ್ದೇನೆ, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಹಿರಿಯರಿದ್ದರೂ ನನಗೆ ಕೇಂದ್ರದ ವರಿಷ್ಠಾಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಎಲ್ಲರನ್ನು ವಿಶ್ಚಾಸಕ್ಕೆ ತೆಗೆದುಕೊಂಡು ಪಕ್ಷದ ಕೆಲಸ ಮಾಡಲಾಗುವುದು. ನನ್ನ ಆಯ್ಕೆಯು ಮೋದಿ, ಜೆ.ಪಿ.ನಡ್ಡಾ, ಅಮಿಶ್ ಷಾ ಅವರ ತೀರ್ಮಾನವಾಗಿದ್ದು ಇದಕ್ಕೆ ಯಾರ ವಿರೋಧವಿಲ್ಲ, ಪಕ್ಷ ಸಂಘಟನೆಗಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೆನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಪಕ್ಷದ ಶಾಸಕಾಂಗ ಸಭೆ ನ.17ರಂದು ನಿಗಧಿಯಾಗಿದ್ದು ಬಿಜೆಪಿ ಕೇಂದ್ರದ ವೀಕ್ಷಕರು ಭಾಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ಇದೀಗ ಜೆಡಿಎಸ್ ಅನ್ನು ಎನ್ ಡಿ ಎ ಜತೆ ಸೇರಿಸಿಕೊಳ್ಳಲಾಗಿದೆ. ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಮೋದಿ ಕೈ ಬಲಪಡಿಸಲಾಗುವುದು ಎಂದರು.
ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ಮಾಜಿ ಶಾಸಕ ರಾಜಣ್ಣ, ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮತಿತರರು ಹಾಜರಿದ್ದರು.