ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಜನರ ಜೀವನ ಹೇಳತೀರದು. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದ್ದು, ಇದರೊಂದಿಗೆ ತೈಲ ಬೆಲೆ ಗಗನಕ್ಕೇರಿದೆ.
ಇಲ್ಲಿನ ಜನರು ಜೀವನ ಕಳೆಯುವುದೇ ದುಸ್ತರವಾಗಿಬಿಟ್ಟಿದೆ. ತರಕಾರಿ, ದಿನಸಿ ಸಾಮಾಗ್ರಿಗಳು, ಗ್ಯಾಸ್ ಬೆಲೆ ಏರಿಕೆ ಮಾಡಿದ್ದು ಆಯ್ತು ಈಗ ತೈಲ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ.
ಮಂಗಳವಾರ ಪೆಟ್ರೋಲ್ ಲೀಟರ್ಗೆ 24.3 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 38.4 ರೂ. ಏರಿಕೆ ಮಾಡುವ ಮೂಲಕ ಪ್ರತಿ ಲೀಟರ್ ಭಾರೀ ಏರಿಕೆಯಲ್ಲಿ ಮಾರಾಟವಾಗುತ್ತಿದೆ.ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ 420 ರೂ. ಆಗಿದ್ದು, ಡೀಸೆಲ್ 400 ರೂ. ಆಗಿದೆ.
ಒಂದೇ ದಿನದಲ್ಲಿ ಮೂರು ಬಾರಿ ಏರಿಕೆ ಮಾಡಲಾಗಿದ್ದು, ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದ್ದೇವೆ ಎಂದು ಸಂಪುಟ ಸಭೆ ಬಳಿಕ ಇಲ್ಲಿನ ಇಂಧನ ಸಚಿವ ಕಂಚಾನ ವಿಜೆಶೇಖರ ಟ್ವೀಟ್ ಮೂಲಕ ತಿಳಿಸಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿರುವುದರಿಂದ ಹಾಗೂ ತೈಲ ಪೂರೈಕೆ ಇಲ್ಲದಿರುವುದರಿಂದ, ಬೇರೆ ದಾರಿ ಇಲ್ಲದೇ ಬೆಲೆ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಈ ಬಿಕ್ಕಟ್ಟು ಉಲ್ಬಣಗೊಂಡು ತಿಂಗಳುಗಟ್ಟಲೇ ಕಳೆದಿದ್ದರೂ ಸ್ವಲ್ಪ ಮಟ್ಟಿಗೂ ಸುಧಾರಣೆ ಕಂಡುಬಂದಿಲ್ಲ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಇಲ್ಲಿನ ಪ್ರಧಾನಿ ಮಹಿಂದ್ರಾ ರಾಜಪಕ್ಸೆ ಕೂಡ ದೇಶವನ್ನೇ ತೊರೆದಿದ್ದಾರೆ. ಪ್ರತಿನಿತ್ಯ ಜನರು ಹೋರಾಟಗಳು ಮುಂದುವರಿದಿದ್ದು, ಸಹಜಸ್ಥಿತಿಯತ್ತ ಬರಲು ತುಂಬಾ ದಿನಗಳೇ ಬೇಕಾಗಬಹುದು.(ಏಜೆನ್ಸೀಸ್)