ಗೊಳಸಂಗಿ: ಪ್ರಸ್ತುತ ವಿಜಯಪುರ ವಿವೇಕನಗರದ ನಿವಾಸಿ, ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ನಿವೃತ್ತ ಅರಣ್ಯಾಧಿಕಾರಿ ಆರ್.ಎಸ್. ಪ್ಯಾಟಿಗೌಡ್ರ ತಮ್ಮ ಪಿಂಚಣಿ ಹಣದಲ್ಲಿ 2.50 ಲಕ್ಷ ರೂ. ಗಳನ್ನು ನಿಡಗುಂದಿ ತಾಲೂಕಿನ ಆಯ್ದ ನೂರು ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಬಳಸಲು ನಿರ್ಧರಿಸಿದ್ದಾರೆ.
13 ವರ್ಷ ಠೇವಣಿ: ಹದಿಮೂರು ವರ್ಷದೊಳಗಿನ ಆಯ್ದ 100 ಹೆಣ್ಣು ಮಕ್ಕಳ ಹೆಸರಲ್ಲಿ ತಲಾ 2,500 ರೂ.ಗಳನ್ನು ಮಗು ಹಾಗೂ ಪೋಷಕರ ಜಂಟಿ ಖಾತೆ ಅಡಿಯಲ್ಲಿ ನಿಸರ್ಗ ಸೌಹಾರ್ದ ಸಹಕಾರಿ ಸಂಘದಲ್ಲಿರುವ ‘ಶ್ರೀ ಸಿದ್ಧೇಶ್ವರ ಚಿಣ್ಣರ ಕ್ಯಾಶ್ ಸರ್ಟಿಫಿಕೇಟ್’ನಲ್ಲಿ 13 ವರ್ಷಗಳ ಕಾಲಾವಧಿಗೆ ಠೇವಣಿ ಮಾಡಿದರೆ, ಮೆಚ್ಯುರಿಟಿ ಮೌಲ್ಯ 12,500 ರೂ. ದೊರೆಯುತ್ತದೆ. ಬಂದ ಹಣದಿಂದ ಮಗುವಿನ ಶೈಕ್ಷಣಿಕ, ಕಲ್ಯಾಣಕ್ಕೆ ಸದ್ವಿನಿಯೋಗ ಮಾಡಲಿ ಎಂಬುದು ಪ್ಯಾಟಿಗೌಡ್ರ ಆಸೆ.
ಆಯ್ಕೆ ಪ್ರಕ್ರಿಯೆ ಹೀಗೆ
ನಿಡಗುಂದಿ ತಾಲೂಕಿನ ಬಡ ನೇಕಾರರ, ಕೂಲಿಕಾರರ, ಮತ್ತು ಅನಾಥ 13 ವರ್ಷದೊಳಗಿನ ಹೆಣ್ಣುಮಕ್ಕಳು ಯೋಜನೆಗೆ ಅರ್ಹರು. ಮಗು ಮತ್ತು ಪಾಲಕರು ಬಿಪಿಎಲ್, ಆಧಾರ ಕಾರ್ಡ್ ಹೊಂದಿರಬೇಕು. ಮಗು ಕಲಿಯುತ್ತಿರುವ ಶಾಲೆ ಮಾಹಿತಿ ಹಾಗೂ ಜನನ ಪ್ರಮಾಣಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ, ಮಗು ಮತ್ತು ಪಾಲಕರ ಜತೆಗಿರುವ 4 ಭಾವಚಿತ್ರವನ್ನು ಆಗಸ್ಟ್ 15ರೊಳಗೆ ವಿಜಯಪುರ ಜಿಲ್ಲಾ ನಿಸರ್ಗ ಸೌಹಾರ್ದ ಸಹಕಾರಿ ಸಂಘ ನಿ., ನಿಡಗುಂದಿ, ವಿಜಯಪುರ ಈ ವಿಳಾಸಕ್ಕೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ವೀಣಾ ಬಿಜಾಪುರ (9845609384), ಮನೋಹರ ತುರುಡಗಿ (8722952684) ಸಂಪರ್ಕಿಸಲು ಕೋರಿದ್ದಾರೆ.
ಕಡು ಬಡತನದಲ್ಲಿ ಹುಟ್ಟಿ ಬೆಳೆದ ನಾನು ಬಡತನದ ಸಂಕಷ್ಟ ಅನುಭವಿಸಿದ್ದೇನೆ. ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ಮದುವೆಯಿಂದ ಬಳಲುತ್ತಿರುವ ಬಡ ಜನತೆಗೆ ಸಹಕಾರಿಯಾಗಲೆಂದು ಇದೊಂದು ಸ್ವಾರ್ಥರಹಿತ, ಅಳಿಲು ಸೇವೆಯಷ್ಟೆ. ಆರ್.ಎಸ್. ಪ್ಯಾಟಿಗೌಡ್ರ, ನಿವೃತ್ತ ಅರಣ್ಯಾಧಿಕಾಕಾರಿ