More

    ಭಾವೈಕ್ಯ ಬದುಕಿಗೆ ದೇಶೀಯತೆ ಅಗತ್ಯ

    ಬಸವಕಲ್ಯಾಣ: ಮಾಸುತ್ತಿರುವ ಮನುಷ್ಯ ಸಂಬಂಧ ಗಟ್ಟಿಗೊಳಿಸಲು, ತನ್ನ ಸುತ್ತಲಿನ ಜೀವಿಗಳ ಜತೆ ಬಾಂಧವ್ಯ ಕಾಪಾಡಲು ಹಾಗೂ ಭಾವೈಕ್ಯದ ಬದುಕಿಗಾಗಿ ದೇಶೀಯತೆ ಅಗತ್ಯವಿದೆ ಎಂದು ಬೀದರ್ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನ್ ಪ್ರೊ.ಜಗನ್ನಾಥ ಹೆಬ್ಬಾಳೆ ಹೇಳಿದರು.

    ನಗರದ ದೊಡ್ಡಪ್ಪ ಅಪ್ಪ ಬಿ.ಇಡಿ ಕಾಲೇಜಿನಲ್ಲಿ ತಾಲೂಕು ಜಾನಪದ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ದೇಸಿ ಚಿಂತನೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಮ್ಮ ನೆಲದ ಸಂಸ್ಕೃತಿ, ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ ಎಂದರು.

    ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಅವರು ದೇಶೀಯತೆ ಮತ್ತು ದೇಶಿವಾದದ ಕುರಿತು ಮಾತನಾಡಿ, ದೇಸಿ ಎಂಬುದು ಸ್ಥಳೀಯವಾದ ಜ್ಞಾನ ಮತ್ತು ಸಾಂಸ್ಕೃತಿಕ ಚಹರೆಯಾಗಿದೆ. ಮಾರ್ಗಕ್ಕೆ ಪರ್ಯಾಯವಾಗಿ ದೇಶೀಯತೆ ರೂಪುಗೊಂಡಿದೆ. ಮಾರ್ಗದ ಅಧಿಕಾರ ತತ್ವವನ್ನು ಪ್ರತಿರೋಧಿಸುವ ಶಕ್ತಿಯೂ ದೇಸಿ ತತ್ವಕ್ಕಿದೆ. ಕನ್ನಡದಲ್ಲಿ ವಚನಗಳು, ಕೀರ್ತನೆ, ತತ್ವಪದಗಳು, ಮರಾಠಿಯಲ್ಲಿ ಅಭಂಗ, ವಾರಕರಿ, ಹಿಂದಿಯಲ್ಲಿ ದೋಹೆ ಇವೆಲ್ಲ ದೇಸಿ ತಾತ್ವಿಕತೆಯನ್ನು ಸಾರಿವೆ ಎಂದು ಪ್ರತಿಪಾದಿಸಿದರು.

    ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ಮಾತನಾಡಿ, ಜಾನಪದ ಎಂಬುದು ಬದುಕಿನ ಎಲ್ಲ ವಲಯಗಳಲ್ಲಿ ತುಂಬಿದೆ. ಜಾಗತೀಕರಣ, ಖಾಸಗೀಕರಣ ಭರಾಟೆಯಲ್ಲಿ ದೇಸಿ ಸಂಸ್ಕೃತಿ ನಾಶವಾಗುತ್ತಿದೆ. ಜಾನಪದ ವೈದ್ಯಕೀಯದಲ್ಲಿ ಹಲವು ರೋಗಗಳಿಗೆ ಔಷಧಗಳಿವೆ. ನಮ್ಮ ನಿರ್ಲಕ್ಷ್ಯ ಮತ್ತು ಅರಿವಿನಿಂದ ಕೊರತೆಯಿಂದ ಅವು ದೂರ ಉಳಿದಿವೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ರಾಚಯ್ಯ ಮಠಪತಿ ಮಾತನಾಡಿ, ಜಾನಪದವಿಲ್ಲದೆ ಏನೂ ಇಲ್ಲ. ನಮ್ಮ ಸಂಸ್ಕೃತಿ ಜಾನಪದದಲ್ಲಿ ಅಡಗಿದೆ. ಪ್ರಶಿಕ್ಷಣಾರ್ಥಿಗಳು ಜಾನಪದದ ಜ್ಞಾನ ಪರಂಪರೆ ಅರಿಯಬೇಕು ಎಂದು ಕಿವಿಮಾತು ಹೇಳಿದರು.

    ಡಾ.ಬಸವರಾಜ ಖಂಡಾಳೆ, ನೀಲೇಶ ಟೊಂಪೆ, ಸಂಗೀತಾ ಮಠಪತಿ, ಬಸವರಾಜ ಶೇರಿ, ಡಾ.ರೂಪೇಶ ಭೋಸ್ಲೆ ಇತರರಿದ್ದರು. ರೇಣುಕಾ ಡೊಂಗರಗಾAವ ನಿರೂಪಣೆ ಮಾಡಿದರು. ವಿವೇಕಾನಂದ ಸ್ವಾಮಿ ವಸ್ತçದ ಜಾನಪದ ಮತ್ತು ತತ್ವಪದಗೀತೆ ಹಾಡಿದರು.

    ವಸಾಹತುಶಾಹಿ ಒಡ್ಡಿದ ವಿಸ್ಮೃತಿಯಿಂದ ಹೊರಬರಲು, ಜಾಗತೀಕರಣದ ತಲ್ಲಣ ಮತ್ತು ಆತಂಕಗಳಿಂದ ತಪ್ಪಿಸಿಕೊಳ್ಳಲು ದೇಶೀಯತೆ ದಾರಿ ಮಹತ್ವದ್ದು. ಏಕತ್ವದ ಹೇರಿಕೆಯಿಂದ ಪಾರಾಗಿ ಬಹುತ್ವ ಉಳಿಸಿಕೊಳುವ ತತ್ವ ದೇಶೀವಾದ ಪ್ರತಿಪಾದಿಸುತ್ತದೆ. ಹಲವು ಯಜಮಾನ್ಯ ಹಾಗೂ ಪ್ರಭುತ್ವಗಳಿಗಿಂತ ಜನ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ದೇಶಿ ವಾದದಲ್ಲಿ ಹೆಚ್ಚು ಮನ್ನಣೆಯಿದೆ.
    | ಡಾ.ಭೀಮಾಶಂಕರ ಬಿರಾದಾರ

    ಜನಪದ ಹಾಡು, ಕಥೆ, ಒಡಪು, ಒಗಟು, ಪರಂಪರೆ ಮೂಲಕ ಕನ್ನಡ ಸಾಂಸ್ಕೃತಿಕ ಚರಿತ್ರೆಯ ಮರುಕಟ್ಟುವಿಕೆ ಮಾಡುವ ಅನಿವಾರ್ಯ ಹಿಂದೆಂದಿಗಿಂತ ಈಗ ಇದೆ. ನಮ್ಮ ಮಣ್ಣಿನಲ್ಲಿ ಸೃಷ್ಟಿಸಿದ ಜ್ಞಾನ, ತಿಳಿವಳಿಕೆ ದೇಸಿ ಚಿಂತನೆಯ ಭಾಗವಾಗಿವೆ.
    | ಡಾ.ಜಗನ್ನಾಥ ಹೆಬ್ಬಾಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts