ಬಸವಕಲ್ಯಾಣ: ರಸ್ತೆಯುದ್ದö್ದಕ್ಕೂ ಮಾರ್ದನಿಸಿದ ಜೈಶ್ರೀರಾಮ ಘೋಷಣೆ, ಹಾರಾಡಿದ ಭಗವಾ ಧ್ವಜ, ಭಕ್ತಿ ಗೀತೆಗೆ ಶ್ರದ್ಧೆಯಿಂದ ಹೆಜ್ಜೆ ಹಾಕಿದ ಯುವಕರ ಪಡೆ, ಹೈಸೌಂಡ್ ಸಿಸ್ಟಮ್ ಎದುರು ಭರ್ಜರಿ ಡಾನ್ಸ್. ಇದು ಶ್ರೀ ರಾಮನವಮಿ ಉತ್ಸವ ನಿಮಿತ್ತ ನಗರದಲ್ಲಿ ಬುಧವಾರ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಕಂಡು ಬಂದ ದೃಶ್ಯ.
ಶ್ರೀರಾಮ ನವಮಿ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಕಾಳಿಗಲ್ಲಿ ಶ್ರೀ ಬಾಲಾಜಿ ಮಂದಿರದಿಂದ ಆರಂಭವಾಗಿ ಶ್ರೀ ಹನುಮಾನ ಮಂದಿರ, ಶ್ರೀ ಬಸವೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಸವ ವೃತ್ತದ ಮೂಲಕ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠ ಎದುರಿನ ಶ್ರೀ ಬಾಲಾಜಿ ಮಂದಿರವರೆಗೆ ಸಾಗಿತು. ಅಲಂಕೃತ ವಾಹನದಲ್ಲಿ ೧೪ ಅಡಿ ಎತ್ತರದ ಶ್ರೀರಾಮನ ಮೂರ್ತಿ ಗಮನ ಸೆಳೆಯಿತು. ನಗರ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ ಭಗವಾ ಶಲ್ಯ ಧರಿಸಿದ ಯುವಕರು ಘೋಷಣೆಗಳನ್ನು ಮೊಳಗಿಸುತ್ತ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತ ಶೋಭಾಯಾತ್ರೆ ಮೆರುಗು ಹೆಚ್ಚಿಸಿದರು.
ಕಾಳಿಗಲ್ಲಿ ಬಾಲಾಜಿ ಮಂದಿರ ಬಳಿ ಶಾಸಕ ಶರಣು ಸಲಗರ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಹಾಗೂ ನಗರಸಭೆ ಪೌರಾಯುಕ್ತ ರಾಜು ಬಣಕರ, ಸಿಪಿಐ ಅಲಿಸಾಬ್ ಮೆರವಣಿಗೆಗೆ ಚಾಲನೆ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ಸಂತೋಷ ಸಾಳುಂಕೆ, ಉಪಾಧ್ಯಕ್ಷ ರಾಜು ಧನ್ನೂರೆ, ಕಾರ್ಯದರ್ಶಿಗಳಾದ ಸಂದೀಪ ಬುಯೆ, ದತ್ತು ಭೆಂಡೆ, ಖಜಾಂಚಿ ಕಿರಣ ಆರ್ಯ, ಸಹ ಖಜಾಂಚಿ ಸತೀಶ ತೆಲಂಗ, ಸದಸ್ಯರಾದ ಶಿವಕುಮಾರ ಸ್ವಾಮಿ, ನಿಲೇಶ್ ಖೂಬಾ, ಶ್ರೀನಿವಾಸ ತೆಲಂಗ, ಸಂಜು ಜಾಧವ್, ಆಭಿಜಿತ್ ಮುತ್ತೆ, ಆಕಾಶ ಮುತ್ತೆ, ದಿಲೀಪಗೌಡ, ವಿಠ್ಠಲ್ ಠಾಕೂರ್, ಲಖನದಾಸ ಭೈರಾಗಿ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಬಜರಂಗ ದಳ ತಾಲೂಕು ಅಧ್ಯಕ್ಷ ರವಿ ನಾವದಗೇಕರ್, ಮುಖಂಡರಾದ ಸೂರ್ಯಕಾಂತ ಚಿಲ್ಲಾಬಟ್ಟೆ, ದಿಗಂಬರ ಜಲ್ದೆ, ಕೃಷ್ಣಾ ಗೋಣೆ, ವೈಭವ ಗೋಸ್ವಾಮಿ, ಸನ್ನಿ ಗುತ್ತೇದಾರ್ ಮೊದಲಾದವರು ಭಾಗವಹಿಸಿದ್ದರು.
ಮೆರವಣಿಗೆಗೆ ಮುನ್ನ ಬೆಳಗ್ಗೆ ಕಾಳಿಗಲ್ಲಿ ಬಾಲಾಜಿ ಮಂದಿರದಲ್ಲಿ ವಿಶೇಷ ಪೂಜೆ, ಆರತಿ ತೊಟ್ಟಿಲು ಕಾರ್ಯಕ್ರಮ ನೆರವೇರಿತು. ಮಾಜಿ ಎಂಎಲ್ಸಿ ವಿಜಯಸಿಂಗ್ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬೆಳಗ್ಗೆಯಂದ ಸಂಜೆವರೆಗೆ ಭಕ್ತರು ಮಂದಿರದಲ್ಲಿ ದರ್ಶನ ಪಡೆದರು. ಶೋಭಾಯಾತ್ರೆ ಸಂಪನ್ನದ ಬಳಿಕ ಬಾಲಾಜಿ ಮಂದಿರ ಬಳಿ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್: ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಅಲಿಸಾಬ್ ನೇತೃತ್ವದಲ್ಲಿ ಪಿಎಸ್ಐ ಅಂಬ್ರೀಶ್ ವಾಗ್ಮೋಡೆ, ಸಂಚಾರಿ ಪಿಎಸ್ಐ ಸುವರ್ಣ ಮಲಶೆಟ್ಟಿ, ಹುಲಸೂರು ಪಿಎಸ್ಐ ನಾಗೇಂದ್ರ ಮತ್ತು ಸಿಬ್ಬಂದಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿರಿಸಿದ್ದರು.
ಕುಡಿಯುವ ನೀರಿನ ವ್ಯವಸ್ಥೆ: ಶೋಭಾಯಾತ್ರೆ ಸಂದರ್ಭದಲ್ಲಿ ಗಾಂಧಿ ವೃತ್ತದ ಬಳಿ ಹಿಂದ್ ವೆಲ್ಫೇರ್ ಸೂಸೈಟಿಯ ಮಿನಾಜ್ ನವಾಬ್ ನೇತೃತ್ವದಲ್ಲಿ ತಂಪಾದ ಕುಡಿಯುವ ನೀರಿನ ಬಾಟಲ್ ವ್ಯವಸ್ಥೆ ಮಾಡಿದರೆ, ಬಸವೇಶ್ವರ ವೃತ್ತದ ಬಳಿ ಎಂ.ಡಿ.ಫಿರೋಜ್ ನೇತೃತ್ವದಲ್ಲಿ ನೀರಿನ ಬಾಟಲಿ ವಿತರಿಸಲಾಯಿತು.