ಬೆಂಗಳೂರು: ಈಗಾಗಲೇ ಸಾಕಷ್ಟು ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ತೆರೆಕಂಡಿವೆ. ಕರೊನಾ ಹಿನ್ನೆಲೆಯಲ್ಲಿ ಕಿರುತೆರೆ ಪರದೆ ಮೇಲೂ ಸಾಕಷ್ಟು ಚಿತ್ರಗಳು ಮುಡಿಬಂದಿವೆ. ಇದೀಗ ಅದೇ ರೀತಿ ಚಿತ್ರಮಂದಿರದಲ್ಲಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಸಿನಿಮಾವೊಂದು ತೆರೆಕಾಣಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಅಶ್ವತ್ಥಾಮ ಶಿವಣ್ಣ
ಹೌದು, ಎಸ್ಪಿಬಿ ಇಲ್ಲವಾಗಿ ತಿಂಗಳ ಮೇಲಾಯಿತು. ಅವರ ನೆನಪಿನಲ್ಲಿಯೇ ತೆನಿಕೆಳ್ಳ ಭರಣಿ ನಿರ್ದೇಶನದ ತೆಲುಗಿನ ‘ಮಿಧುನಂ’ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಎಸ್ಪಿಬಿ ಜತೆಗೆ ಹಿರಿಯ ನಟಿ ಜೂಲಿ ಲಕ್ಷ್ಮೀ ಸಹ ಈ ಸಿನಿಮಾದಲ್ಲಿದ್ದಾರೆ.
2012ರಲ್ಲಿಯೇ ಮಿಥುನಂ ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಸುದೀರ್ಘ 8 ವರ್ಷದ ಬಳಿಕ ಆ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗುತ್ತಿದೆ.
ಆನಂದ್ ಮುಯಿದ ರಾವು ನಿರ್ಮಿಸಿದ ಈ ಚಿತ್ರಕ್ಕೆ ತನಿಕೆಳ್ಳ ಭರಣಿ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ: ಚಿತ್ರನಟ ದರ್ಶನ್ ಓಡೋಡಿ ಬರಲು ಡಿಕೆಶಿ ಹಸು ಅಲ್ಲ!
ಸದ್ಯ ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯ ಶುರುವಾಗಿದೆ. ಕನ್ನಡದಲ್ಲೂ ಆನಂದ ಅವರೇ ನಿರ್ಮಿಸುತ್ತಿದ್ದು, ಮಧುಸೂದನ್ ಹವಾಲ್ದಾರ್ ಅವರಿಗೆ ಸಾಥ್ ನೀಡಿದ್ದಾರೆ. ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದು, ಡಿಸೆಂಬರ್ನಲ್ಲಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.