ಕರೊನಾ ಸೋಂಕಿಗೆ ಒಳಗಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್. ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಇಂದು ಮತ್ತಷ್ಟು ಚೇತರಿಕೆ ಕಂಡುಬಂದಿದೆ.
ಬಾಲಸುಬ್ರಹ್ಮಣ್ಯಂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ನಿನ್ನೆ ಹೇಳಲಾಗಿತ್ತು. ಇಂದು ಮತ್ತೂ ಸ್ವಲ್ಪ ಚೇತರಿಸಿಕೊಂಡಿದ್ದು, ಅವರಲ್ಲಿ ಚಲನೆ ಕಂಡುಬರುತ್ತಿದೆ. ಹಾಗೇ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಗುರುತಿಸುತ್ತಿದ್ದಾರೆ ಎಂದು ಅವರ ಪುತ್ರ ಎಸ್.ಪಿ. ಚರಣ್ ತಿಳಿಸಿದ್ದಾರೆ.
ಇಂದು ತಮ್ಮ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿ, ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿರುವ ಚರಣ್ ಅವರು, ಎಸ್ಪಿಬಿ ಶೀಘ್ರವೇ ಗುಣಮುಖರಾಗುತ್ತಾರೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಹಾಗೇ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಮತ್ತೊಮ್ಮೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುವುದಿಲ್ಲ ಎಂದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕದ್ದುಮುಚ್ಚಿ ಭಾರತದ ಭೂಪ್ರದೇಶಕ್ಕೆ ಬಂದ ಪಾಕ್ ಮೀನುಗಾರರು ಬಿಎಸ್ಎಫ್ ಯೋಧರನ್ನು ನೋಡಿ ನೀರಿಗೆ ಹಾರಿದರು
ನನ್ನ ಅಪ್ಪನನ್ನು ಐಸಿಯುದಿಂದ ಎಕ್ಸ್ಲ್ಯೂಸಿವ್ ಐಸಿಯುಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಚಲನೆ ಕಂಡುಬರುತ್ತಿದೆ ಎಂಬುದೇ ಸಮಾಧಾನ. ಇನ್ನೂ ವೆಂಟಿಲೇಟರ್ ಸಹಾಯದಲ್ಲೇ ಇದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟಕ್ಕೆ ತೀವ್ರ ಕಷ್ಟಪಡುತ್ತಿದ್ದರು. ಆದರೆ ಈಗ ಸ್ವಲ್ಪ ಆರಾಮಾಗಿ ಉಸಿರಾಡುತ್ತಿದ್ದಾರೆ ಎಂದೂ ಚರಣ್ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಸಿಬ್ಬಂದಿ ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಈಗ ನನ್ನ ತಂದೆ ಸಂಪೂರ್ಣ ನಿದ್ರಾವಸ್ಥೆಯಲ್ಲಿಲ್ಲ. ಆರೋಗ್ಯ ಸುಧಾರಿಸುತ್ತಿದೆ. ಹಾಗೇ ಹಲವರು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಕರೊನಾ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲು- ವಿಡಿಯೋ ಸಂದೇಶ